Thursday, November 30, 2023

ಪುರಂದರದಾಸರು ಹಾಗೂ ಕನಕದಾಸರು ದಾಸ ಸಾಹಿತ್ಯದ ಎರಡು ಕಣ್ಣುಗಳು

ಈ ದಿವಸ ವಾರ್ತೆ

ವಿಜಯಪುರ:

ವಿಜಯನಗರ ಅರಸರ ಪರವಾಗಿ ಯುದ್ಧದಲ್ಲಿ ಭಾಗವಹಿಸಿ, ಸೋಲನ್ನು ಅನುಭವಿಸಿ, ಅನೇಕ ಸಾವು- ನೋವುಗಳನ್ನು ನೋಡಿದ ದಾಸ ಶ್ರೇಷ್ಠ ಕನಕದಾಸರು ವೈರಾಗ್ಯ ಹೊಂದಿ, ಸಂಸಾರವನ್ನು ತ್ಯಾಗ ಮಾಡಿದರು. ದೇಶ ಸಂಚಾರ ಮಾಡುತ್ತ, ತಮ್ಮ ಕೀರ್ತನೆಗಳ ಮೂಲಕ ಜಾತಿ, ಮತ, ಪಂಥ, ಅಸಮಾನತೆ, ಅನ್ಯಾಯ, ಮೌಡ್ಯತೆಗಳನ್ನು ಹೋಗಲಾಡಿಸಲು ನಿರಂತರ ಶ್ರಮಿಸಿದರು. ತಿಮ್ಮಪ್ಪ ನಾಯಕನೆಂದು ಕರೆಸಿಕೊಳ್ಳುತ್ತಿದ್ದ ಇವರು ಗುರುಗಳಾದ ವ್ಯಾಸರಾಯರಿಂದ ಕನಕದಾಸರೆಂದು ಮರುನಾಮಕರಣ ಹೊಂದಿದರು. ತಮ್ಮ ಆರಾಧ್ಯ ದೈವ ‘ಕಾಗಿನೆಲೆ ಆದಿ ಕೇಶವರಾಯ’ ಎಂಬ ಹೆಸರಿನಿಂದ ಹಲವಾರು ಕೀರ್ತನೆಗಳನ್ನು ರಚಿಸಿ, ಸಮಾಜವನ್ನು ಸುಧಾರಣೆ ಮಾಡಲು ಅವಿರತ ಪ್ರಯತ್ನ ಮಾಡಿದರು ಎಂದು  ಕನ್ನಡ ಹಿರಿಯ ಉಪನ್ಯಾಸಕರಾದ ಪ್ರೊ.  ಸಿದ್ದು ಸಾವಳಸಂಗ ತಮ್ಮ ಉಪನ್ಯಾಸ ನೀಡುತ್ತಾ  ಹೇಳಿದರು.

ಇಂದು ಕನಕದಾಸರ ಜಯಂತಿ ಪ್ರಯುಕ್ತ ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜು, ವಿಜಯಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಅವರು ಹಾವೇರಿ ಜಿಲ್ಲೆಯ ಬಾಡ ಎನ್ನುವಂತ ಚಿಕ್ಕ ಗ್ರಾಮದಲ್ಲಿ ಕ್ರಿ.ಶ.೧೫೦೮ ರಲ್ಲಿ ಬೀರಪ್ಪ ನಾಯಕ  ಹಾಗೂ ಬಚ್ಚಮ್ಮ ದಂಪತಿಗಳ ಮಗನಾಗಿ ಕನಕದಾಸರು ಜನಿಸಿದರು. ಅವರ ಪೂರ್ವನಾಮ ತಿಮ್ಮಪ್ಪನಾಯಕ. ಮುಂದೆ ವಿಜಯನಗರ ಅರಸರಿಂದ ೭೮ ಗ್ರಾಮಗಳನ್ನು ಪಡೆದು ಅವರು ನಾಯಕರಾಗಿದ್ದರು.

ಆನಂತರ  ಯುದ್ಧದ ಸಾವು ನೋವುಗಳನ್ನು ಅರಿತು ಸಂಸಾರ ತ್ಯಾಗ ಮಾಡಿ ಸಂತರಾದರು.

ಕುಲ ಕುಲವೆಂದು ಹೊಡೆದಾಡದಿರಿ

ನಿಮ್ಮ ಕುಲದ ನೆಲೆಯನ್ನೇನಾದರೂ ಬಲ್ಲಿರಾ ಬಲ್ಲಿರಾ 

ಎಂದು ಜಾತಿ-ಮತಗಳ ವಿರುದ್ಧ ದನಿಯೆತ್ತಿದರು. ಹಾಗೆಯೇ ‘ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಎಂದು ಇನ್ನೊಂದು ಕೀರ್ತನೆಯಲ್ಲಿ ಹೇಳುತ್ತಾರೆ. ಪುರಂದರದಾಸರು ಹಾಗೂ ಕನಕದಾಸರು ದಾಸ ಸಾಹಿತ್ಯದ ಎರಡು ಕಣ್ಣುಗಳು ಎಂದು ಪ್ರೊ. ಸಿದ್ದು ಸಾವಳಸಂಗ ಹೇಳಿದರು. 

ಇನ್ನೋರ್ವ ಹಿರಿಯ ಉಪನ್ಯಾಸಕರಾದ ಪ್ರೊ. ಎಸ್. ಆರ್. ಬಿರಾದಾರ ಮಾತನಾಡುತ್ತಾ ಶ್ರೇಷ್ಠ ಸಂತನಾದ ಕನಕದಾಸರು ಅನೇಕ ಕೀರ್ತನೆಗಳನ್ನು ರಚಿಸಿ, ಅವುಗಳನ್ನು ಹಾಡುತ್ತಾ ದೇಶ ಸಂಚಾರ ಮಾಡಿ, ಜನರಲ್ಲಿ ಜಾಗೃತಿಯನ್ನು ಮೂಡಿಸಿದರು. ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಅತ್ಯಂತ ಅವಿಸ್ಮರಣೀಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಸಿ.ಬಿ . ನಾಟೀಕಾರ ಮಾತನಾಡುತ್ತಾ ತಮ್ಮ ಭಕ್ತಿಯಿಂದ ಉಡುಪಿಯ ಶ್ರೀ ಕೃಷ್ಣನನ್ನು ಒಲಿಸಿಕೊಂಡಿರುವ ಸಂತ ಕನಕದಾಸರು ಸಮಾಜಕ್ಕೆ ಹಾಗೂ ಕನ್ನಡ ಸಾಹಿತ್ಯಕ್ಕೆ ನೀಡಿರುವ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಕೇವಲ ಕಾಟಾಚಾರಕ್ಕಾಗಿ ಅವರ ಜಯಂತಿಯನ್ನು ಆಚರಿಸದೆ, ಅವರ ತತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ನಾವು ಉತ್ತಮ ನಾಗರಿಕರಾಗಲು ಪ್ರಯತ್ನಿಸಬೇಕು ಎಂದು ಹೇಳಿದರು.

ಇದಕ್ಕೂ ಮೊದಲು ದಾಸ ಶ್ರೇಷ್ಠ ಸಂತನಾದ ಕನಕದಾಸರ ಭಾವಚಿತ್ರಕ್ಕೆ ಪೂಜಾ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಕಾಲೇಜಿನ ವಿದ್ಯಾರ್ಥಿನಿಯರು ಕನಕದಾಸರ ಕುರಿತು ಮಾತನಾಡಿದರು. ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿನಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣಗೊಳಿಸಿದರು.


ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು

No comments:

Post a Comment