Friday, April 28, 2023

ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗಣುಗುಣವಾಗಿ ಸಾಹಿತ್ಯ ರಚನೆಯಾಗುತ್ತಿವೆ: ಬಸವರಾಜ ಸೂಳಿಬಾವಿ

ಈ ದಿವಸ ವಾರ್ತೆ

ವಿಜಯಪುರ : ಬಹುರಾಷ್ಟ್ರೀಯ ಕಂಪನಿಗಳ ಹಿತಾಸಕ್ತಿಗಳಿಗನುಗುಣವಾಗಿ ಇಂದು ಸಾಹಿತ್ಯ ರಚನೆ ಹಾಗೂ ಪ್ರಚಾರಗಳು ಆಗುತ್ತಿದೆ. ಸಾಹಿತ್ಯವನ್ನು ಜನತೆಯಿಂದ ದೂರ ಮಾಡಿ  ಕಾರ್ಪೋರೇಟಿಕರಣಗೊಳಿಸುವ ಕೆಲಸ ನಡೆಯುತ್ತಿದೆ. ಆ ಮೂಲಕ ಕನ್ನಡ ಸಾಹಿತ್ಯವನ್ನು ಬೂಸದ ಕಡೆ ಹೊರಳಿಸುವ ಪ್ರಯತ್ನ ವ್ಯಾಪಕವಾಗಿ ನಡೆಯುತ್ತಿದೆ. ನಮ್ಮ ಕನ್ನಡ ಸಾಹಿತ್ಯ ಪರಂಪರೆ ಜನಮುಖಿ, ಜನತೆಗೋಸ್ಕಕರ ಸಾಹಿತ್ಯ ಪರಂಪರೆಯನ್ನು ಮರುಕಳುಸುವ ಉದ್ದೇಶವನ್ನು ಹೊಂದಿ ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ, ಕವಲಕ್ಕಿ ಚಿತ್ತಾರ ಕಲಾ ಬಳಗ ಧಾರವಾಡ, ಮೇ ಸಾಹಿತ್ಯ ಮೇಳ ಬಳಗ ವಿಜಯಪುರದ ವತಿಯಿಂದ ಮೇ 27, 28 ರಂದು ನಗರದ ಕಂದಗಲ್ಲ ಹನುಮಂತಾಯ ರಂಗಮಂದಿರದಲ್ಲಿ ರಾಷ್ಟ್ರ ಮಟ್ಟದ ಚಿಂತಕರು ಪ್ರತಿನಿಧಿಗಳು ಸೇರಿದಂತೆ ರಾಜ್ಯದ ಸಾಹಿತಿಗಳು ಚಿಂತಕರು ಪ್ರತಿನಿಧಿಗಳು ಭಾಗವಹಿಸುವ 9ನೇ ಮೇ ಸಾಹಿತ್ಯ ಮೇಳವನ್ನು ಆಯೋಜಿಸಲಾಗಿದೆ ಎಂದು ಲಡಾಯಿ ಪ್ರಕಾಶನದ ಪ್ರಕಾಶಕರಾದ ಬಸವರಾಜ ಸೂಳಿಬಾವಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಗೂ ಪ್ರಗತಿಪರ ವಿಚಾರಕ್ಕೂ ಅವಿನಾಭಾವ ಸಂಬಂಧವಿದೆ. ವಿಜಯಪುರದಲ್ಲಿ ಹಿಂದೆ ಬಂಡಾಯ ಸಾಹಿತ್ಯ ಸಮ್ಮೇಳನ, ಸಮಾವೇಶ ಕೂಡ ಆಗಿತ್ತು. ದಲಿತ ಸಾಹಿತ್ಯ  ಸಮಾವೇಶ ಆಗಿದೆ. ಈಗ ಬಹುಮುಖ್ಯವಾಗಿ ಪ್ರಗತಿಪರವಾದ ಜನತೆಯ ಆಶೋತ್ತರಗಳಿಗೆ ಸ್ಪಂದಿಸುವಂತಹ ಜನತೆಗಾಗಿ ಸಾಹಿತ್ಯದ ಉದ್ದೇಶವನ್ನು ಹೊಂದಿ ಈ ಮೇ 9ನೇ ಸಮ್ಮೇಳವನ್ನು ವಿಜಯಪುರ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದರು.


ಈ ಸಾಹಿತ್ಯ ಮೇಳಕ್ಕೆ ಸರ್ಕಾರದಿಂದಾಗಲಿ ಯಾವುದೇ ಸಂಸ್ಥೆಗಳಿಂದಾಗಲಿ ರಾಜಕಾರಣಿಗಳಿಂದಾಗಲಿ ಯಾವುದೇ ರೀತಿಯ ಅನುದಾನವನ್ನು ನಾವು ತೆಗೆದುಕೊಳ್ಳುತ್ತಿಲ್ಲ. ಮುಖ್ಯವಾಗಿ ಸಮಾನ ಮನಸ್ಕ, ಸಹಭಾಗಿ ಗೆಳೆಯರು ಸ್ವತ ತಮ್ಮ ಕೈಲಾದ ತನು,ಮನ,ಧನ ಸಹಕಾರವನ್ನು ಪಡೆದು ಆಯೋಜಿಸಲಾಗಿದೆ ಎಂದರು.

ಈ ಸಮ್ಮೇಳನಕ್ಕೆ 1500 ಜನ ಪ್ರತಿನಿಧಿಗಳು ರಾಜ್ಯಾದ್ಯಂತ ಆಗಮಿಸುತ್ತಿದ್ದಾರೆ. ಈ ಸಮ್ಮೇಳನದಲ್ಲಿ ಕಲ್ಕತ್ತದ ಹರ್ಷ ಮಂದೇರ, ಟೀಸ್ಟ್ ಸೆತಲ್ವಾಡ ಮೊದಲಾದ ಚಿಂತಕರು ಪಾಲ್ಗೊಳ್ಳಲಿದ್ದಾರೆ ಎಂದರು.

ಈ 9ನೇ ಮೇ ಸಮ್ಮೇಳನವನ್ನು ಹೋರಾಟ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಪ್ರಕಾಶ ಹಿಟ್ನಳ್ಳಿ, ನಮ್ಜಾ ಬಾಂಗಿ, ಭೀಮಶಿ ಕಲಾದಗಿ, ಉಮಾ ಎಂ. ಕಲ್ಬುರ್ಗಿ, ತುಕಾರಾಂ ಚಂಚಲಕರ್, ವಿಹಾನ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದರು.

ದೇಶದ ಸಂವಿಧಾನವನ್ನು ಬದಲಾಯಿಸುವ, ಸಂವಿಧಾನವನ್ನೇ  ನಗಣ್ಯಗೊಳಿಸುವಂತಹ ಕೆಲಸ ಕೂಡ ನಡೆಯುತ್ತಿದೆ. ಇದು ಆಗಕೂಡದು. ಪ್ರಜೆಗಳು ಈ ದೇಶವನ್ನು ಆಳುವಂತಾಗಬೇಕು. ಇದು ಇಡೀ ಸ್ವಾತಂತ್ರ್ಯ ಹೋರಾಟಗಾರರ ಕನಸು ಕೂಡ ಆಗಿತ್ತು. ಆದರೆ ಇವತ್ತು ಕನಸುಗಾರಿಕೆಯ ತಳಹದಿಯು ಅಲ್ಲಾಡುಸುವ ಪರಿಸ್ಥಿತಿಗೆ ತಲೆದೋರಿದೆ. ಪತ್ರಕರ್ತರನ್ನು ಸಹ ಜೈಲಿಗೆ ಅಟ್ಟುತ್ತಿದ್ದಾರೆ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸಲಾಗುತ್ತಿದೆ. ಧ್ವನಿ ಎತ್ತುವವರ ಧ್ವನಿ ಅಡಗಿಸುವ ಹುನ್ನಾರ ನಡೆಯುತ್ತಿದೆ. ಆದ್ದರಿಂದ ಈ ಸಮ್ಮೇಳನದಲ್ಲಿ ಭಾರತೀಯ ಪ್ರಜಾತಂತ್ರ ಚಾರಿತ್ರಿಕ ನೋಟ, ರಾಷ್ಟ್ರೀಯ ಹೋರಾಟ ಆಶಯಗಳು, ಸಮ ಸಮಾಜದ ಕನಸುಗಳು, ಸಂವಿಧಾನದ ಪರಿಕಲ್ಪನೆ ಮತ್ತು ಅಂಬೇಡ್ಕರ್ ಕನಸುಗಳು, ಪ್ರಜಾತಂತ್ರ ಸಾಗಿದ ದಾರಿ ಅಸ್ಮಿತೆ ರಾಜಕಾರಣ, ದಲಿತ , ಆದಿವಾಸಿ ಧಾರ್ಮಿಕ ಅಲ್ಪಸಂಖ್ಯಾತ ಹಿಂದುಳಿದ ವರ್ಗ, ಮಹಿಳಾ ನೆಲೆ, ಬೌದ್ಧ , ಸೂಫಿ, ಶರಣ ಪರಂಪರೆಯಲ್ಲಿ ಪ್ರಜಾತಂತ್ರದ ಆಶಯಗಳು, ಪ್ರಜಾಪ್ರಭುತ್ವ : ಯುವ ಸ್ಪಂದನ, ಪ್ರಜಾತಂತ್ರದ ಬಿಕ್ಕಟ್ಟುಗಳು, ಎದುರಿಸುವ ಬಗೆ ಕುರಿತು ವಿಶಿಷ್ಠ ಗೋಷ್ಠಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅನೀಲ ಹೊಸಮನಿ, ಪ್ರಭುಗೌಡ ಪಾಟೀಲ, ವಾಸುದೇವ ಕಾಳೆ, ಅಭಿಷೇಕ ಚಕ್ರವರ್ತಿ, ಅಕ್ರಂ ಮಾಶ್ಯಾಳಕರ, ದೊಡ್ಡಣ್ಣ ಭಜಂತ್ರಿ, ಎ.ಎಲ್.ನಾಗೂರ,ಚಂದ್ರಶೇಖರ ಘಂಟೆಪ್ಪಗೋಳ,  ಅಬ್ದುಲರೆಹಮಾನ ಬಿದರಕುಂದಿ, ದ್ರಾಕ್ಷಾಯಿಣಿ ಬಿರಾದಾರ, ಚೆನ್ನು ಕಟ್ಟಿಮನಿ, ಸಿದ್ರಾಮ ಬಿರಾದಾರ, ಭರಮಣ್ಣ ತೋಳಿ,  ಎಂ.ಬಿ.ಕಟ್ಟಿಮನಿ ಮತ್ತಿತರರು ಉಪಸ್ಥಿತರಿದ್ದರು.