Sunday, September 18, 2022

ವಿಜಯಪುರ ಆಕಾಶವಾಣಿಯಿಂದ ನಾಡಿನಲ್ಲಿ ಜ್ಞಾನ ದಾಸೋಹ: ಡಾ.ವಿಜಯಮಹಾಂತೇಶ ದಾನಮ್ಮನವರ

 


ಈ ದಿವಸ ವಾರ್ತೆ

ವಿಜಯಪುರ : ವಿಜಯಪುರ ಆಕಾಶವಾಣಿ ಕೇಂದ್ರದ ರಜತ್ ಮಹೋತ್ಸವ ಸಂಭ್ರಮ ರಜತ ರವಿ ಕಾರ್ಯಕ್ರಮವು ಸೆಪ್ಟೆಂಬರ್ 18ರಂದು ಎಂಪಿ ಸ್ಟುಡಿಯೋದಲ್ಲಿ ಸಂಭ್ರಮದಿAದ ನಡೆಯಿತು.

ಪ್ರಸಾರ ಭಾರತಿ, ಭಾರತದ ಸಾರ್ವಜನಿಕ ಪ್ರಸಾರ ಸೇವೆ, ಆಕಾಶವಾಣಿ ವಿಜಯಪುರ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, 1997ರ ಸೆಪ್ಟೆಂಬರ್ 18 ರಂದು ವಿಜಯಪುರ ಆಕಾಶವಾಣಿಯು ಜನ್ಮ ತಳೆಯಿತು. ಆ ದಿನ ವಿಜಯಪುರದ ಇತಿಹಾಸದಲ್ಲಿ ಒಂದು ಹೊಸ ಶಕೆ ಆರಂಭವಾಯಿತು. ಈ ಮೂಲಕ ಅವಿಭಜಿತ ವಿಜಯಪುರ ಜಿಲ್ಲೆಯ ಜನತೆಯ ಬಹುವರ್ಷಗಳ ನಿರೀಕ್ಷೆ, ಹಂಬಲ, ಹೋರಾಟ, ಕನಸುಗಳು ಆ ವೇಳೆಯಲ್ಲಿ ಸಾಕಾರಗೊಂಡಿತು ಎಂದು ತಿಳಿಸಿದರು.

ವಿಜಯಪುರ ಆಕಾಶವಾಣಿಯು 1997ರಿಂದಲೂ ತನ್ನ ಮೂಲ ಧೇಯೋದ್ದೇಶಗಳಾದ ಶಿಕ್ಷಣ, ಮಾಹಿತಿ ಮತ್ತು ಮನರಂಜನೆಗಳಿಗೆ ಅನುಗುಣವಾದ ವಿವಿಧ ಕಾರ್ಯಕ್ರಮಗಳನ್ನು ಬಿತ್ತರಿಸಿ, ಜ್ಞಾನ ದಾಸೋಹ ನಡೆಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ ಎಂದು ತಿಳಿಸಿದರು.

ನಮ್ಮ ಸಂಸ್ಕೃತಿ, ಇತಿಹಾಸಗಳ ಎಲ್ಲಾ ಬೇರುಗಳು ಆಕಾಶವಾಣಿಯ ಧ್ವನಿ ಮುದ್ರಿಕೆಗಳಲ್ಲಿ ಭದ್ರವಾಗಿವೆ. ಇದೆ ಆಕಾಶವಾಣಿಯ ವಿಶೇಷತೆಯಾಗಿದೆ. ಈ ನೆಲದ ಜನಪದ ಸಿರಿಯದ ಗೀಗಿ, ಲಾವಣಿ, ಗೋಂಧಳಿ, ಲಂಬಾಣಿ, ಚೌಡಕಿ, ಪಾರಿಜಾತ, ಭಜನೆ, ಹಂತಿ ಪದಗಳು ಈಗಲೂ ಡಿಜಿಟಲ್ ಮಾಧ್ಯಮದಲ್ಲಿ ಸುರಕ್ಷಿತವಾಗಿರುವುದು ಆಕಾಶವಾಣಿ ಕೇಂದ್ರದ ಬಹುದೊಡ್ಡ ಕೊಡುಗೆಯಾಗಿದೆ ಎಂದು ತಿಳಿಸಿದರು.

ಈಗ ಪ್ರತಿ ದಿನ ಅಂದಾಜು 15 ಲಕ್ಷ ಜನರಿಗೆ ಪ್ರಸಾರ ಸೇವೆ ಒದಗಿಸುತ್ತ ಕೇಂದ್ರವು ನಾಡಿನ ಸೇವೆಯಲ್ಲಿ ತೊಡಗಿದೆ ಎಂಬುದು ಜಿಲ್ಲೆಯ ಜನತೆಗೆ ಅಭಿಮಾನದ ಸಂಗತಿಯಾಗಿದೆ. ಕಳೆದ 25 ವರ್ಷಗಳಿಂದಲೂ ಕೇಂದ್ರದಿAದ ಅನೇಕ ಸೃಜನಶೀಲ ಹಾಗೂ ಕ್ರಿಯಾಶೀಲ ಕಾರ್ಯಕ್ರಮಗಳು ಸುಗಮವಾಗಿ ನಡೆದಿರುವುದರ ಹಿಂದೆ ಈ ಕೇಂದ್ರದ ತಾಂತ್ರಿಕ ಹಾಗೂ ಆಡಳಿತ ಅಧಿಕಾರಿಗಳು, ಸಿಬ್ಬಂದಿ ವರ್ಗದ ಶ್ರಮವಿದೆ. ಕೇಂದ್ರದಲ್ಲಿರುವ ಎಲ್ಲರೂ ಆಕಾಶವಾಣಿಯನ್ನು ಜನಸ್ನೇಹಿ ಹಾಗೂ ಜನಪರವಾಗಿಸಿರುವುದು ಅಭಿನಂದನಾರ್ಹ ಸಂಗತಿಯಾಗಿದೆ. ಅವರ ಪ್ರಯತ್ನದಿಂದ ಅನೇಕ ಗೌರವ ಸನ್ಮಾನಗಳು ಕೇಂದ್ರಕ್ಕೆ ಲಭಿಸಿರುವುದು ಸಂತಸದ ಸಂಗತಿಯಾಗಿದೆ ಎಂದು ತಿಳಿಸಿದರು.

ಬರುವ ದಿನಗಳಲ್ಲಿ ಇನ್ನು ಹೆಚ್ಚಿನ ಉತ್ಸಾಹ, ಹುರುಪುಗಳೊಂದಿಗೆ ಈ ನಾಡಿನ ಜನಸೇವೆಯಲ್ಲಿ ತೊಡಗಿಕೊಂಡು ಸಕಾರಾತ್ಮಕ ಬದಲಾವಣೆಯ ಕಾರಣ ಕರ್ತನಾಗಿ ಹೊರಹೊಮ್ಮುವ ವಿಶ್ವಾಸವನ್ನು ವಿಜಯಪುರ ಆಕಾಶವಾಣಿ ಕೇಂದ್ರವು ಹೊಂದಿದೆ. ಕೇಳುಗ ಪ್ರಭುಗಳಾದ ನಾವುಗಳು ಆಕಾಶವಾಣಿ ಕಾರ್ಯಕ್ರಮಗಳನ್ನು ಆಲಿಸುತ್ತ ಸಂಪೂರ್ಣ ಸಹಕಾರ, ಬೆಂಬಲ ನೀಡೋಣ ಎಂದು ತಿಳಿಸಿದರು.



ಈ ವೇಳೆ ವಿಜಯಪುರ ಜಿಲ್ಲಾ ಕಸಾಪ ಅಧ್ಯಕ್ಷ ಹಾಸೀಮಪೀರ ವಾಲೀಕಾರ ಅವರು ಮಾತನಾಡಿ, ವಿಜಯಪುರ ಆಕಾಶವಾಣಿಯು ಜನರ ಆಶೋತ್ತರಗಳಿಗೆ ಸ್ಪಂದಿಸಿ ಅವರಿಗೆ ಅವಶ್ಯಕವಾದ ಕಾರ್ಯಕ್ರಮಗಳನ್ನು ಕಳೆದ 25 ವರ್ಷಗಳಿಂದಲೂ ನೀಡುತ್ತ ಬಂದಿದೆ. ಆಕಾಶವಾಣಿ ಹಬ್ಬ, ರೈತರಿಗೆ ಸಾವಯವ ಕೃಷಿ ತರಬೇತಿ, ಜಿಲ್ಲೆಯ ಯುವ ಪ್ರತಿಭೆಗಳ ಅನಾವರಣ, ಬಿಎಲ್‌ಡಿಇ ಆರೋಗ್ಯದಂಗಳ ಕಾರ್ಯಕ್ರಮ, ಭಾರತದ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿ ಪ್ರಸಾರ ಮಾಡಿರುವುದು, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಸ್ವಾತಂತ್ರ‍್ಯ ಹೋರಾಟಗಾರರ ಬಗೆಗಿನ ಇತಿಹಾಸದ ಸರಣಿ ಜೊತೆಗೆ ಇನ್ನು ಅನೇಕ ಸರಣಿ ಕಾರ್ಯಕ್ರಮಗಳನ್ನು ಪ್ರಾಯೋಜಿಸುತ್ತ ಬಂದಿರುವುದು ಈ ಕೇಂದ್ರದ ವಿಶೇಷತೆಯಾಗಿದೆ ಎಂದು ತಿಳಿಸಿದರು

ಬಾಗಲಕೋಟೆ ಜಿಲ್ಲಾ ಕಸಾಪ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಅವರು ಮಾತನಾಡಿ, ವಿಜಯಪುರ ಮತ್ತು ಬಾಗಲಕೋಟ ಅವಳಿ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳಿಗೆ ತೆರಳಿ ಕಲಾವಿದರನ್ನು, ಸಾಧಕ ಕೃಷಿಕರನ್ನು ಹುಡುಕಿ, ಗುರುತಿಸಿ ಅವರನ್ನು ಹೊರ ಜಗತ್ತಿಗೆ ಪರಿಚಯಿಸುವ ಕಾರ್ಯವನ್ನು ಆಕಾಶವಾಣಿ ಈಗಲೂ ನಿರಂತರ ಮಾಡುತ್ತಿದೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.

ನಿಲಯದ ಕಾರ್ಯಕ್ರಮ ಮುಖ್ಯಸ್ಥರಾದ ಬಿ.ವಿ.ಶೀಧರ ಅವರು ಪ್ರಾಸ್ತಾವಿಕ ಮಾತನಾಡಿ, ವಿಜಯಪುರ ಆಕಾಶವಾಣಿಯು ಪ್ರಸಾರ ಆರಂಭಿಸಿದ ಕೆಲವೇ ದಿನಗಳಲ್ಲಿ ಜನರ ಆಪ್ತ ಮಿತ್ರನಾಯಿತು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು. ಕಳೆದ ಕೆಲವು ವರ್ಷಗಳ ಹಿಂದೆ ರೇಡಿಯೋ ಸೆಟ್ ಕೇಳುಗರ ಸಂಖ್ಯೆ ಶೇ.54ರಷ್ಟ್ಟು ಇತ್ತು. ಆದರೆ ಅವುಗಳ ಉತ್ಪಾದನೆ ಕಡಿಮೆ ಆಗಿರುವುದರಿಂದ ಅಲ್ಲದೆ ಮೊಬೈಲ್ ಮೂಲಕ ಕೇಳುವ ಸೌಲಭ್ಯ ದೊರೆತಿರುವುದರಿಂದ ರೇಡಿಯೋ ಸೆಟ್ ಕೇಳುಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಮೊಬೈಲ್ ಮೂಲಕ ಕೇಳುವರ ಸಂಖ್ಯೆ ಶೇ.85 ರಷ್ಟಾಗಿದೆ. ಈಗ ಡಿಜಿಟಲ್ ಕ್ರಾಂತಿ ನಡೆಯುತ್ತಿದೆ. ಆಕಾಶವಾಣಿಯು ತಂತ್ರಜ್ಞಾನದ ಎಲ್ಲ ಸಾಧ್ಯತೆಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುತ್ತಿದೆ. ನ್ಯೂಸ್ ಆನ್ ಏರ್ ಆ್ಯಪ್ ಮೂಲಕ ಶ್ರೋತೃಗಳು ಆಕಾಶವಾಣಿ ಕೇಂದ್ರದ ಕಾರ್ಯಕ್ರಮಗಳನ್ನು ವಿಶ್ವದ ಯಾವುದೇ ಭಾಗದಲ್ಲಿಯೂ ಕೇಳಬಹುದಾಗಿದೆ ಎಂದು ತಿಳಿಸಿದರು.

ಚಿಂತನ, ಭಕ್ತಿಗೀತೆ, ಚಿತ್ರಗೀತೆ, ವಾಟ್ಸಪ್ ಮೆಚ್ಚಿನ ಹಾಡು, ಜನಪದ ಹಾಡು, ಸುದ್ದಿ, ರೂಪಕ, ನಾಟಕ, ಸಂದರ್ಶನ, ಭಾಷಣ, ನೇರ ಪ್ರಸಾರ, ಫೋನ್–ಇನ್, ಕಿಸಾನ್ ವಾಣಿ, ಆರೋಗ್ಯ, ಯುವಕಾರಂಜಿ, ಯುವವಾಣಿ, ಬಾನುಲಿ ವರದಿ, ಚರ್ಚೆ, ಕವಿತಾ ವಾಚನ, ಸ್ವಾತಂತ್ರ‍್ಯ ಹೋರಾಟ ಹೆಜ್ಜೆಗಳು, ಮುಂತಾದ 50ಕ್ಕೂ ಹೆಚ್ಚು ಕಾರ್ಯಕ್ರಮಗಳು ಈಗಲೂ ಕೇಂದ್ರದಿಂದ ಪ್ರತಿದಿನ ಪ್ರಸಾರವಾಗುತ್ತಿವೆ ಎಂದು ತಿಳಿಸಿದರು.

ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕರಾದ ಡಾ.ಸೋಮಶೇಖರ ರುಳಿ, ತಾಂತ್ರಿಕ ವಿಭಾಗದ ಮುಖ್ಯಸ್ಥ ಎಸ್.ಎಸ್.ಶೇಖ ಮತ್ತು ಆಕಾಶವಾಣಿಯ ಎಲ್ಲ ಸಿಬ್ಬಂದಿ ಉಪಸ್ಥಿತರಿದ್ದರು. ಕಾರ್ಯಕ್ರಮ ನಿರ್ವಾಹಕ ಡಾ.ಸೋಮಶೇಖರ ರುಳಿ ಅವರು ವಂದಿಸಿದರು. ಶಿವಕುಮಾರ ಮತ್ತು ಮಹಾನಂದ ಅವರು ನಿರೂಪಿಸಿದರು.

ಚಿಂತನ ಗೋಷ್ಠಿ: ಕಾರ್ಯಕ್ರಮದಲ್ಲಿ ಚಿಂತನ ಗೋಷ್ಠಿಗಳು ನಡೆದವು. ನಾಟಕಕಾರ, ಜನಪದ ಸಾಹಿತಿ ಬಿ.ಆರ್.ಪೊಲೀಸ್ ಪಾಟೀಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಡಾ.ಸೋಮಶೇಖರ ವಾಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಕ್ಕಳ ಸಹಾಯವಾಣಿ ಸಂಯೋಜಕಿ ಸುನಂದಾ ತೋಳಬಂದಿ, ಕೃಷಿ ಇಲಾಖೆಯ ಆತ್ಮಾ ಯೋಜನೆಯ ಉಪ ಯೋಜನಾ ನಿರ್ದೇಶಕ ಡಾ.ಎಂ.ಬಿ.ಪಟ್ಟಣಶೆಟ್ಟಿ, ಪರಿಸರವಾದಿ ಅಂಬಾದಾಸ ಜೋಶಿ ಅವರು ಚಿಂತನಾ ಗೋಷ್ಠಿಯಲ್ಲಿ ಭಾಗವಹಿಸಿದ್ದರು. ನಂತರ ಜರುಗಿದ ಕೇಳುಗರಿಂದ ಕೇಳುಗರಿಗೆ ಕಾರ್ಯಕ್ರಮದಲ್ಲಿ ನ್ಯಾಮತ್ ಭಾಷಾ ಹುಣಶ್ಶಾಳ, ಕಲ್ಯಾಣಿ ಪತ್ತಾರ, ಸಾಕ್ಷಿ ಬಿರಾದಾರ, ಅನಂತ ಟೀಕಾರೆ ಗುರುರಾಜ ಪತ್ತಾರ ಭಾಗವಹಿಸಿದ್ದರು.

ಮೋದಿ ಜನ್ಮ ದಿನಾಚರಣೆ ಹಿನ್ನೆಲೆ ದೇಶ ರಕ್ಷಕ ಪಡೆಯಿಂದ ರಕ್ತದಾನ ಶಿಬಿರ

 




ಈ‌ ದಿವಸ ವಾರ್ತೆ

ವಿಜಯಪುರ: ದೇಶ ರಕ್ಷಕರ ಪಡೆ ಆಕಾಶ ರಕ್ತ ಸಹಾಯವಾಣಿ ವತಿಯಿಂದ ವಿಜಯಪುರ ರಕ್ತ ನಿಧಿ ಕೇಂದ್ರ ಸಹಯೋಗಲ್ಲಿ ಪ್ರಧಾನಿ ನರೇಂದ್ರ ಮೋದಿ ಯವರ 73 ನೆ ಜನ್ಮದಿನದ ಪ್ರಯುಕ್ತ ನಗರದ ಡೋಬಳೆ ಗಲ್ಲಿ ಈಶ್ವರ ಮಂದಿರ ದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು .



ಖ್ಯಾತ ಮಧುಮೇಹ ತಜ್ಞರಾದ ಬಾಬು ರಾಜೇಂದ್ರ ನಾಯಿಕ , ಸಮಾಜಸೇವಕರು ಶ್ರೀಶೈಲ ಹುಟಗಿ ಮತ್ತು ಖ್ಯಾತ ಉದ್ಯಮಿ ವಿಜಯ ಚವ್ಹಾಣ ಅವರು ಈ ಕಾರ್ಯಕ್ರಮಕ್ಕೆ ಭೇಟಿ ನೀಡಿ, ದೇಶದ ಕಣ್ಮಣಿಗಳಾದ ನಮ್ಮಯುವಕರೇ ನಮ್ಮ ಸಂಸ್ಕೃತಿ ಸಂಪ್ರದಾಯ ಉಳಿಸಲು ಸಾಧ್ಯ. ಆದ್ದರಿಂದ ಜಗಮೆಚ್ಚಿದ ದೇಶ ಕಂಡ ಅದ್ಭುತ ಪ್ರಧಾನಿ ನರೇಂದ್ರ ಮೋದಿ ಯವರ ಜನ್ಮದಿನದ ಪ್ರಯುಕ್ತ ಇಂತಹ ಶಿಬಿರ ಆಯೋಜಿಸಿ ನಿಮ್ಮ ಸಾಮಾಜಿಕ ಜವಾಬ್ದಾರಿಯ ದರ್ಶನ ಮಾಡಿದ್ದೀರಿ ದೇಶ ರಕ್ಷಕರ ಪಡೆ ಸಂಘಟನೆ ಇನ್ನು ಬೆಳಿಯಲಿ ಇನ್ನು ಹೆಚ್ಚಿನ ಸಾಮಾಜಿಕ ಕೆಲಸ ಮಾಡಲು ಇನ್ನು ಹೆಚ್ಚಿನ ಶಕ್ತಿ ನಿಮಗೆ ದೊರೆಯಲಿ ಎಂದು ಹಾರೈಸಿದರು . ಈ ಸಂಧರ್ಭದಲ್ಲಿ ಸಂಘಟನೆಯ ದೇಶ ರಕ್ಷರ ಪಡೆ ಸಂಸ್ಥಾಪಕರಾದ ರೋಹನ ಆಪ್ಟೆ ಪದಾಧಿಕಾರಿಗಳಾದ ನ್ಯಾಯವಾದಿ ಅಜಯ ಸೂರ್ಯವಂಶಿ , ವಿಕ್ರಮ ತಾಂಬೇಕರ , ಪ್ರೇಮ ಕಲಕುಟಗಿ , ಕಿರಣ ಕೊಳುರಗಿ,ರಾಹುಲ ಪಾಟೀಲ , ಆದಿತ್ಯ ಬಡಿಗೇರ, ಸಿದ್ದು ಬರಗಿ , ಮಹಿಳಾ ಪಡೆ ಘಟಕದ ವಸುಂಧರಾ ದೇಶಪಾಂಡೆ, ಶ್ವೇತಾ ಕುಲಕರ್ಣಿ ,  ರಿಶಿತಾ ನಿಕ್ಕಮ ಜಯಶ್ರೀ ಕನ್ನೂರ ಸವಿತಾ ತಳವಾರ ಉಪಸ್ಥಿತರಿದ್ದರು.