Monday, July 10, 2023

ವಿಜಯಪುರ ನೂತನ ಜಿಲ್ಲಾಧಿಕಾರಿಯಾಗಿ ಟಿ.ಭೂಬಾಲನ ಅಧಿಕಾರ ಸ್ವೀಕಾರ

 


 ಈ ದಿವಸ ವಾರ್ತೆ                              

ವಿಜಯಪುರ : ಬಾಗಲಕೋಟೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ  2015ರ ಬ್ಯಾಚ್‍ನ  ಐಎಎಸ್ ಅಧಿಕಾರಿ ಟಿ.ಭೂಬಾಲನ್ ಅವರು ವಿಜಯಪುರ ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು. ವಿಜಯಪುರ  ನಿರ್ಗಮಿತ ಜಿಲ್ಲಾಧಿಕಾರಿಗಳಾದ  ವಿಜಯಮಹಾಂತೇಶ ದಾನಮ್ಮನವರ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಬರಮಾಡಿಕೊಂಡು, ಹೂಗುಚ್ಛ ನೀಡಿ ಸ್ವಾಗತಿಸಿ, ಸೋಮವಾರ ಅಧಿಕಾರ ಹಸ್ತಾಂತರಿಸಿದರು.



 3 ವರ್ಷಗಳ ಕಾಲ ಬಾಗಲಕೋಟ ಜಿಲ್ಲೆಯ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದ ಟಿ.ಭೂಬಾಲನ್ ಅವರು ವಿಜಯಪುರ ಜಿಲ್ಲಾಧಿಕಾರಿಗಳಾಗಿ ವರ್ಗಾವಣೆಯಾಗಿದ್ದು, ಈ ಹಿಂದೆ ಬೀದರ ಮತ್ತು ದಾವಣಗೆರೆಯಲ್ಲಿ ಪ್ರೊಬೆಷನರಿಯಾಗಿ ಹಾಗೂ ಹರಪನಹಳ್ಳಿ  ಮತ್ತು ಉಡುಪಿಯಲ್ಲಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ, ಸ್ಮಾರ್ಟ ಸಿಟಿ ವ್ಯವಸ್ಥಾಪಕ ನಿರ್ದೇಶಕರಾಗಿ ಹಾಗೂ ಚುನಾವಣಾ ಸಂದರ್ಭದಲ್ಲಿ ಬೆಳಗಾವಿ ವಿಶೇಷ ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.