ಇಂದಿನ ಆಧುನಿಕ ಸಮಾಜದಲ್ಲಿ “ತಾಯಿ ದಿನ”, “ತಂದೆ ದಿನ”, “ಹಿರಿಯರ ದಿನ” ಎಂಬ ವಿಶೇಷ ಆಚರಣೆಗಳು ಬಹಳ ಜನಪ್ರಿಯವಾಗಿವೆ. ಆ ದಿನ ಮಕ್ಕಳಿಂದ ಪೋಷಕರಿಗೆ ಉಡುಗೊರೆಗಳು, ಶುಭಾಶಯಗಳು, ಪ್ರೀತಿಯ ಮಾತುಗಳು, ಸಾಮಾಜಿಕ ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್ಗಳು ಹರಿದು ಬರುತ್ತವೆ. ಆದರೆ ಮನಸ್ಸಿಗೆ ನೋವು ಕೊಡುವ ಸತ್ಯ ಏನೆಂದರೆ, ಇದೇ ಪ್ರೀತಿ ಮತ್ತು ಕಾಳಜಿ ಪ್ರತಿದಿನ ತೋರಿಸಲ್ಪಟ್ಟಿದ್ದರೆ, ಇಂದು ನಮ್ಮ ಸಮಾಜದಲ್ಲಿ ಇಷ್ಟು ವೃದ್ಧಾಶ್ರಮಗಳ ಅಗತ್ಯವೇ ಉಂಟಾಗುತ್ತಿರಲಿಲ್ಲ.
ತಾಯಿ-ತಂದೆಗಳು ಮಕ್ಕಳಿಗಾಗಿ ತಮ್ಮ ಸಂಪೂರ್ಣ ಜೀವನವನ್ನೇ ಅರ್ಪಿಸುತ್ತಾರೆ. ಮಗು ಹುಟ್ಟಿದ ಕ್ಷಣದಿಂದಲೇ ಅವರ ಕನಸು, ಸಂತೋಷ, ಭವಿಷ್ಯ ಎಲ್ಲವೂ ಮಗುವಿನ ಸುತ್ತಲೇ ತಿರುಗುತ್ತವೆ. ತಾಯಿ ತನ್ನ ನಿದ್ರೆಯನ್ನು ಬಿಟ್ಟು ಮಗುವಿನ ಅಳುವಿಗೆ ಸ್ಪಂದಿಸುತ್ತಾಳೆ. ತಂದೆ ತನ್ನ ಆಸೆಗಳನ್ನು ಬದಿಗಿಟ್ಟು ಮಗುವಿನ ವಿದ್ಯಾಭ್ಯಾಸ ಮತ್ತು ಭವಿಷ್ಯಕ್ಕಾಗಿ ದುಡಿಯುತ್ತಾನೆ. ಮಕ್ಕಳಿಗೆ ನೋವಾಗದಂತೆ ತಮ್ಮ ನೋವನ್ನು ಮರೆಮಾಡಿಕೊಳ್ಳುವವರು ಪೋಷಕರು. ಮಗುವಿನ ಒಂದು ನಗು ನೋಡಲು ಸಾವಿರ ಕಷ್ಟಗಳನ್ನು ಸಹಿಸುವ ಮಹಾನ್ ಹೃದಯಗಳು ಅವರದು.
ಆದರೆ ಕಾಲ ಬದಲಾಗುತ್ತಾ, ಮಕ್ಕಳು ದೊಡ್ಡವರಾದ ನಂತರ ತಮ್ಮದೇ ಜೀವನದಲ್ಲಿ ಬ್ಯುಸಿಯಾಗುತ್ತಾರೆ. ಉದ್ಯೋಗ, ಹಣ, ವೈಭವ, ವೈಯಕ್ತಿಕ ಸ್ವಾತಂತ್ರ್ಯ ಇವೆಲ್ಲದರ ನಡುವೆ ಪೋಷಕರಿಗೆ ಸಮಯ ಕೊಡಲು ಮರೆತುಬಿಡುತ್ತಾರೆ. ಕೆಲವು ಮಕ್ಕಳು ವರ್ಷದಲ್ಲಿ ಒಂದು ದಿನ ಮಾತ್ರ “ಅಮ್ಮಾ, ಅಪ್ಪಾ ನೀವು ನನ್ನ ಜಗತ್ತು” ಎಂದು ಹೇಳುತ್ತಾರೆ. ಆದರೆ ಉಳಿದ ದಿನಗಳಲ್ಲಿ ಅವರ ಜೊತೆ ಮಾತನಾಡಲು ಸಹ ಸಮಯ ಕೊಡೋದಿಲ್ಲ. ಈ ಒಂದು ದಿನದ ಪ್ರೀತಿ ಪೋಷಕರ ಮನದ ಖಾಲಿತನವನ್ನು ತುಂಬಲಾರದು.
ಇಂದು ಅನೇಕ ವೃದ್ಧಾಶ್ರಮಗಳಲ್ಲಿ ವಾಸಿಸುವ ಹಿರಿಯರು ಹಣಕ್ಕಾಗಿ ಅಲ್ಲ, ಪ್ರೀತಿಗಾಗಿ ಕಾಯುತ್ತಿದ್ದಾರೆ. ಅವರಿಗೆ ದುಬಾರಿ ಉಡುಗೊರೆಗಳು ಬೇಕಿಲ್ಲ. “ಊಟ ಮಾಡಿದ್ದೀರಾ?”, “ಔಷಧಿ ತೆಗೆದುಕೊಂಡಿರಾ?”, “ಹೇಗಿದ್ದೀರಾ?” ಎಂದು ಕೇಳುವ ಒಂದು ಆತ್ಮೀಯ ಧ್ವನಿ ಸಾಕು. ಆದರೆ ಈ ಮಾತುಗಳು ಕೇಳಿಸದೇ ಹೋದಾಗ, ಅವರ ಜೀವನದಲ್ಲಿ ಒಂಟಿತನ ಹೆಚ್ಚಾಗುತ್ತದೆ. ಮಕ್ಕಳು ಜೀವಂತವಾಗಿದ್ದರೂ, ಅವರ ನೆನಪುಗಳಲ್ಲಿ ಮಾತ್ರ ಬದುಕುವ ಪರಿಸ್ಥಿತಿ ಬರುತ್ತದೆ.
ವೃದ್ಧಾಶ್ರಮಗಳ ಗೋಡೆಗಳು ಅನೇಕ ಮೌನ ಕಣ್ಣೀರಿನ ಕಥೆಗಳನ್ನು ಹೇಳುತ್ತವೆ. ಅಲ್ಲಿ ಇರುವ ಪ್ರತಿಯೊಬ್ಬ ತಂದೆ-ತಾಯಿಯ ಕಣ್ಣುಗಳಲ್ಲಿ ಒಂದೇ ಪ್ರಶ್ನೆ ಕಾಣುತ್ತದೆ. “ನಮ್ಮ ಮಕ್ಕಳಿಗಾಗಿ ಬದುಕಿದ್ದ ನಾವು, ಇಂದು ಏಕೆ ಅನಾಥರಂತೆ ಬದುಕಬೇಕು?” ಎಂಬುದು. ಈ ಪ್ರಶ್ನೆ ಕೇವಲ ಅವರದು ಮಾತ್ರವಲ್ಲ; ಅದು ಇಡೀ ಸಮಾಜದ ಮನಸ್ಸನ್ನು ಕಾಡುವ ಪ್ರಶ್ನೆಯಾಗಿದೆ.
ಪ್ರೀತಿ ಎಂದರೆ ಕೇವಲ ಒಂದು ದಿನದ ಆಚರಣೆ ಅಲ್ಲ. ಅದು ಪ್ರತಿದಿನದ ವರ್ತನೆಯಲ್ಲಿ ಕಾಣಬೇಕು. ಪೋಷಕರ ಜೊತೆ ಕೆಲವು ಕ್ಷಣ ಕಳೆಯುವುದು, ಅವರ ಆರೋಗ್ಯದ ಕಡೆ ಗಮನ ಕೊಡುವುದು, ಅವರ ಮಾತುಗಳನ್ನು ಸಹನೆಯಿಂದ ಕೇಳುವುದು, ಅವರಿಗೆ ಒಂಟಿತನ ಅನ್ನಿಸದಂತೆ ನೋಡಿಕೊಳ್ಳುವುದು ಇವೆಲ್ಲವೇ ನಿಜವಾದ ಪ್ರೀತಿ ಮತ್ತು ಕಾಳಜಿ. ಮಕ್ಕಳು ಈ ಸಣ್ಣ ಸಣ್ಣ ವಿಷಯಗಳನ್ನು ಪ್ರತಿದಿನ ಪಾಲಿಸಿದ್ದರೆ, ಇಂದು ಅನೇಕ ವೃದ್ಧಾಶ್ರಮಗಳು ಖಾಲಿಯಾಗುತ್ತಿದ್ದವು.
ಬಾಲ್ಯದಲ್ಲಿ ಮಗು ನಡೆಯಲು ಕಲಿತಾಗ ತಂದೆ ಕೈ ಹಿಡಿದಿದ್ದ. ಇಂದು ವಯಸ್ಸಾದ ತಂದೆ ನಡೆಯಲು ಕಷ್ಟಪಟ್ಟಾಗ ಮಗ ಕೈ ಹಿಡಿಯಬೇಕು. ತಾಯಿ ಬಾಲ್ಯದಲ್ಲಿ ಮಗು ತಿನ್ನದೇ ಇದ್ದರೆ ಕಥೆ ಹೇಳಿ ಊಟ ಮಾಡಿಸುತ್ತಿದ್ದಳು. ಇಂದು ಅದೇ ತಾಯಿಗೆ ಸಮಯಕ್ಕೆ ಔಷಧಿ ಕೊಡುವುದು ಮಗುವಿನ ಕರ್ತವ್ಯ. ಜೀವನದ ನಿಜವಾದ ಅರ್ಥ ಇದೇ ಪೋಷಕರು ನಮ್ಮನ್ನು ನೋಡಿಕೊಂಡAತೆ, ನಾವು ಅವರ ವಯಸ್ಸಿನಲ್ಲಿ ಅವರನ್ನು ನೋಡಿಕೊಳ್ಳಬೇಕು.
ಹಿರಿಯರು ಮನೆಯ ಭಾರವಲ್ಲ; ಅವರು ಮನೆಯ ಆಶೀರ್ವಾದ. ಅವರ ಅನುಭವ ಜೀವನದ ದಾರಿ ತೋರಿಸುವ ದೀಪ. ಅವರ ಸಾನ್ನಿಧ್ಯ ಮನೆಯ ಶಾಂತಿ ಮತ್ತು ಸಂಸ್ಕೃತಿಯ ಸಂಕೇತ. ಅವರನ್ನು ದೂರ ಮಾಡುವ ಸಮಾಜ ಯಾವತ್ತೂ ಸಂಪೂರ್ಣ ಸಂತೋಷ ಕಂಡುಕೊಳ್ಳಲು ಸಾಧ್ಯವಿಲ್ಲ.
ಒಂದು ದಿನದ ಪ್ರೀತಿಯನ್ನು ಪ್ರದರ್ಶಿಸುವುದಕ್ಕಿಂತ ಪ್ರತಿದಿನ ಅವರ ಜೊತೆ ನಿಂತು ಬದುಕುವುದು ಮುಖ್ಯ. ಪೋಷಕರಿಗೆ ಬೇಕಾಗಿರುವುದು ದೊಡ್ಡ ಉಡುಗೊರೆಗಳಲ್ಲ, ಪ್ರೀತಿಯಿಂದ ತುಂಬಿದ ಕೆಲವು ಕ್ಷಣಗಳು. ಮಕ್ಕಳು ಪ್ರತಿದಿನ ಕಾಳಜಿ ತೋರಿಸಿದರೆ, ವೃದ್ಧಾಶ್ರಮಗಳ ಸಂಖ್ಯೆ ಕಡಿಮೆಯಾಗುವುದಷ್ಟೇ ಅಲ್ಲ, ಪೋಷಕರ ಕಣ್ಣೀರಿನ ಜಾಗದಲ್ಲಿ ಸಂತೋಷ ಕಾಣಿಸಿಕೊಳ್ಳುತ್ತದೆ. ಯಾಕೆಂದರೆ ತಾಯಿ-ತಂದೆಗಳಿಗೆ ಬೇಕಾಗಿರುವುದು “ವಿಶೇಷ ದಿನದ ಗೌರವವಲ್ಲ… ಜೀವನಪೂರ್ತಿ ಇರುವ ಆತ್ಮೀಯತೆ.”
ವಿಶೇಷ ವರದಿ : ಕಲ್ಲಪ್ಪ ಶಿವಶರಣ, 7207279187

