Sunday, September 13, 2026

ಗ್ರಂಥಾಲಯಗಳು ನಿಜ ಮನುಷ್ಯರನು ಸೃಷ್ಟಿಸುತ್ತವೆ: ಕುಲಸಚಿವ ಸೋಮಲಿಂಗ ಗೆಣ್ಣೂರ


ವಿಜಯಪುರ: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು, ಪುಸ್ತಕಪ್ರೀತಿಯಿಂದ ಮನುಷ್ಯರೂಪದ ಜೀವಿಯೊಬ್ಬ ನಿಜವಾದ ಮನುಷ್ಯನಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಈ ಹಿಂದಿನ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿದ್ದ ಸೋಮಲಿಂಗ ಗೆಣ್ಣೂರ ಹೇಳಿದರು. 

ವಿಜಯಪುರದ ನವರಸಪುರದಲ್ಲಿರುವ ತಿಕೋಟಾದ ನೇತ್ರಾಧಿಕಾರಿ ಡಾ. ಪ್ರಕಾಶ ಪರಣಾಕಾರ ಅವರ ಮನೆಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರತಿಯೊಂದು, ನಿಜವಾದ ಪುಸ್ತಕದ ಒಳಗೂ ನಮ್ಮೊಂದಿಗೆ ಸಂವಾದಕ್ಕೆ ಹಾತೊರೆಯುವ ಒಂದು ವ್ಯಕ್ತಿತ್ವ ಮತ್ತು ಮನಸ್ಸಿದೆ ದಿಕ್ಕು ತಪ್ಪಿಸುವ, ಮೌಢ್ಯಬಿತ್ತುವ ಕಂದಾಚಾರಕ್ಕೆ ದೂಡುವ ಪುಸ್ತಕಗಳ ತಿರಸ್ಕರಿಸಿ, ವೈಚಾರಿಕ ಹಾಗೂ ವೈಜ್ಞಾನಿಕತೆ ಬಿತ್ತುವ ಪುಸ್ತಕಗಳ ಓದಬೇಕು ಎಂದರು.

ಈ ಸಂದರ್ಭ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಒಂದು ಪುಸ್ತಕವನ್ನೋದುವುದೆಂದರೆ ಬಸವಣ್ಣನ ಸಮಸಮಾಜವನು ಮುನ್ನಡೆಸುವುದು ಎಂದರ್ಥ. ಅದೊಂದು ಹೊಸ ಅನುಭವ ಹಾಗೂ ಪ್ರಪಂಚದಲ್ಲಿ ಸಹೃದಯರು ಕೈಗೊಳ್ಳುವ ಪರ್ಯಟನವೋ ಅಥವಾ ರಸಯಾತ್ರೆಯೋ ಆಗಿರುತ್ತದೆ ಎಂದರು.

ಕನ್ನಡ ಪುಸ್ತಕ ಪ್ರಾಧಿಕಾರದ ವಿಜಯಪುರ ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯ ಪ್ರೊ. ಬಸವರಾಜ ಜಾಲವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನ ಕಾಣಬಲ್ಲ, ಆದರೆ ಪುಸ್ತಕ ಓದದವನು ಒಂದು ಹುಟ್ಟಿನಲ್ಲಿ ಕೇವಲ ಒಂದೇ ಜೀವನ ಅನುಭವಿಸಬಲ್ಲ’ ಎಂದು ನೆನಪಿಸಿ, ಬುದ್ಧ, ಬಸವ, ಅಂಬೇಡ್ಕರರೇ ಈ ಜನ್ಮಕೆಷ್ಟು ಪುಸ್ತಕ ಓದಿದ ಬಳಿಕ ಇವನಾರವ, ಇವನಾರವ ಎನ್ನದೇ ಇಂವ ನಮ್ಮಂವ, ಇಂವ ನಮ್ಮವ ಎಂದಾದರೆ ಓದಿದ್ದಕ್ಕೂ ಸಾರ್ಥಕವಾಯಿತು ಎಂದು ಪುಸ್ತಕದ ಮಹತ್ವ ಸಾರಿದರು.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಕಮರಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು ಕನ್ನಡ ಪುಸ್ತಕ ಪ್ರಾಧಿಕಾರದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಇದೊಂದು ಆದರ್ಶ ಕಾರ್ಯಕ್ರಮ ಪ್ರತಿಯೊಬ್ಬರ ಮನೆಯಲ್ಲೂ ಈ ತರದ ಕಾರ್ಯಕ್ರಮಗಳನ್ನ ಮಾಡಿದಾಗ ಪುಸ್ತಕ ಪ್ರೀತಿಯ ಬಗ್ಗೆ ಒಲವು ಮೂಡುತ್ತದೆ ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಬೇಕೆಂದು ಕರೆಕೊಟ್ಟರು. ಸ್ವಾಮಿಗಳಾದವರ ನಿಜವಾದ ಅಭಿಲಾಶೆಯೂ ಇದೇ ಆಗಿರುತ್ತದೆ. ಸಮಾಜ ಈ ತರದ ಕಾರ್ಯಕ್ರಮ ಹಮ್ಮಿಕೊಂಡು ಕತ್ತಲಿನಿಂದ ಹೊರಬರಲು ಕರೆಕೊಟ್ಟರು.

ಯರಡೋಣದ ಕುಮಾರೇಶ್ವರ ಸ್ವಾಮಿಗಳು, ಪ್ರಗತಿಪರ ರೈತ ಮಲ್ಲಿಕಾರ್ಜುನ ಹಂಜಗಿ, ಶ್ರೀಧರ್ ಮುರಾಳೆ, ಬಾಬೂರಾವ ಮಹಾರಾಜ, ವೀರೇಶ ಹಿರೇಮಠ ವೇದಿಕೆ ಮೇಲಿದ್ದರು.

ಬಸವರಾಜ ಬೆಳಗಲಿ ಸ್ವಾಗತಿಸಿದರು.ಸಿದ್ಧಾರ್ಥ ಪರಣಾಕರ ವಂದಿಸಿದರು. 

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

ಕಲ್ಯಾಣ ಕರ್ನಾಟಕ ಸಾರಿಗೆಯ ವಿಜಯಪುರ ವಿಭಾಗದಲ್ಲಿ ಹೈದ್ರಾಬಾದ್ ವಿಮೋಚನಾ ದಿನ ಆಚರಣೆಗೆ ಆಗ್ರಹಿಸಿ ಮನವಿ



ವಿಜಯಪುರ : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ ವಿಜಯಪುರ ವಿಭಾಗೀಯ
 ಕಚೇರಿ ಹಾಗೂ ಎಲ್ಲ ಘಟಕಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನಾಚರಣೆ (ಕಲ್ಯಾಣ ಕರ್ನಾಟಕ ಉತ್ಸವ ) ಆಚರಿಸಲು ಆಗ್ರಹಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಅರುಣಕುಮಾರ ಎಮ್ ವೈ ಪಾಟೀಲ ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿ ದೇವಾನಂದ ಬಿರಾದಾರ ಅವರಿಗೆ ಸಾರಿಗೆ ಅಧಿಕಾರಿ ಮಂಜುನಾಥ ಕೋಟ್ಯಾಳ ಅವರ ಮೂಲಕ ವಿಜಯಪುರ ಜಿಲ್ಲಾ  371 (ಜೆ) ಹೋರಾಟ ಸಮಿತಿಯಿಂದ ಇಂದು ಮನವಿ ಸಲ್ಲಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಎಲ್ಲ  ವಿಭಾಗಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನ (ಕಲ್ಯಾಣ ಕರ್ನಾಟಕ ಉತ್ಸವ) ವನ್ನು ಆಚರಣೆ ಮಾಡುತ್ತ ಬರುತ್ತಿದ್ದಾರೆ.ಈ ಬಾರಿ ವಿಜಯಪುರ  ವಿಭಾಗದ ಕೇಂದ್ರ ಕಚೇರಿ ಸೇರಿದಂತೆ ಎಲ್ಲ ಘಟಕಗಳಲ್ಲಿ ಹೈದ್ರಾಬಾದ್ ವಿಮೋಚನಾ ದಿನ (ಕಲ್ಯಾಣ ಕರ್ನಾಟಕ ಉತ್ಸವ ) ಆಚರಣೆ ಮಾಡಿ ವಿಮೋಚನಾ ಚಳುವಳಿ ನೇತೃತ್ವ ವಹಿಸಿದ 
ಸ್ವಾಮಿ ರಾಮಾನಂದ ತೀರ್ಥರು, ಸರ್ದಾರ ಡಾ ಬಸವರಾಜ ನಾಗೂರು, ಸಿದ್ದಗೊಂಡಪ್ಪಗೌಡ ಪಾಟೀಲ ಅವರು ಸೇರಿದಂತೆ ಈ ಭಾಗದ ಅನೇಕ ಸ್ವಾತಂತ್ರ‍್ಯ  ಹೋರಾಟಗಾರರು ಹಾಗೂ ವಿಮೋಚನಾ ಚಳುವಳಿಯ ಮಹಾನ್ ಚೇತನಗಳಿಗೆ ಗೌರವ ಸಲ್ಲಿಸಬೇಕು ಎಂದು ಹೋರಾಟಗಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಹೋರಾಟಗಾರರಾದ ವಿನೋದ ಖೇಡ ಲಾಯಪ್ಪ ಇಂಗಳೆ ಅನಿಲ ಇಕ್ಕಡೆ, ಗಿರೀಶ ಕಲಘಟಗಿ ಸೇರಿದಂತೆ  ಮುಂತಾದವರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ವಿಜಯಾನಂದ ಟ್ರಾವೆಲ್ಸ್ ಹೊಸ ದಾಖಲೆ!

 ಸಾರಿಗೆ ಕ್ಷೇತ್ರದಲ್ಲಿ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. (ವಿಟಿಪಿಎಲ್) ಹೊಸ ದಾಖಲೆ ಬರೆದಿದೆ. ವೋಲ್ವೋ ಇಂಡಿಯಾ ಸಂಸ್ಥೆ ಮೂಲಕ ಸಿಂಗಲ್ ಆರ್ಡರ್‌ನಲ್ಲಿ 150 ವೋಲ್ವೋ ಬಸ್‌ಗಳನ್ನು ಖರೀದಿಸಿದೆ. ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ.ಗೆ  150 ವೋಲ್ವೋ-9600 ಐಷಾರಾಮಿ ಸ್ಲೀಪರ್ ಕೋಚ್ ಗೋಲ್ಡ್ ಕ್ಲಾಸ್ ಬಸ್‌ಗಳನ್ನು ಹಸ್ತಾಂತರಿಸಿತು. ಈ ಒಪ್ಪಂದವು ಖಾಸಗಿ ಟ್ರಾವೆಲ್ಸ್‌ವೊಂದು ವೋಲ್ವೋ ಬಸ್‌ಗೆ ನೀಡಿದ ಅತಿದೊಡ್ಡ ಆರ್ಡರ್ ಆಗಿದೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ವೋಲ್ವೋ ಸಂಸ್ಥೆಯ ಎಂಡಿ ಮತ್ತು ಸಿಇಒ ಬಿ. ಶ್ರೀನಿವಾಸ್ ಅವರು ವಿಆರ್‌ಎಲ್ ಮೀಡಿಯಾ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಡಾ. ಆನಂದ ಸಂಕೇಶ್ವರ ಹಾಗೂ ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವಾ ಸಂಕೇಶ್ವರ ಅವರಿಗೆ ಕೀ ಹಸ್ತಾಂತರಿಸುವ ಮೂಲಕ ಬಸ್‌ಗಳನ್ನು ನೀಡಿದರು. ವೋಲ್ವೋ ಸಂಸ್ಥೆಯ ವಿಇ ವಾಣಿಜ್ಯ ವಾಹನಗಳು ವಿಭಾಗದ ಮುಖ್ಯ ವಾಣಿಜ್ಯ ಅಧಿಕಾರಿ ಎಸ್.ಎಸ್. ಗಿಲ್ ಮತ್ತು ವಿಇ ವಾಣಿಜ್ಯ ವಾಹಗಳ ಇವಿಪಿ ಬಸ್ ವಿಭಾಗದ ಸುರೇಶ್ ಚೆಟ್ಟಿಯಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಆನಂದ ಸಂಕೇಶ್ವರ, 1996ರಲ್ಲಿ ವಿಜಯಾನಂದ ಟ್ರಾವೆಲ್ಸ್ ಆರಂಭವಾಯಿತು. 2007ರಿಂದ ವೋಲ್ವೋ ಕಂಪನಿ ಜತೆ ನಮ್ಮ ಒಪ್ಪಂದವಿದೆ. ಮೊದಲು 20 ಬಸ್‌ಗಳನ್ನು ಖರೀದಿ ಮಾಡಲಾಗಿತ್ತು. 2012ರ ವೇಳೆ 100 ಬಸ್‌ಗಳನ್ನು ಆರ್ಡರ್ ಮಾಡಿದ್ದೇವು. ಈಗ 150 ಬಸ್‌ಗಳನ್ನು ಆರ್ಡರ್ ಮಾಡಿದ್ದೇವೆ. ರಾಜ್ಯ ಮತ್ತು ದೇಶಾದ್ಯಂತ ನಮ್ಮ ನೆಟ್‌ವರ್ಕ್ ಇರುವುದರಿಂದ ಪ್ರಯಾಣಿಕರಿಗೆ ಅತಿ ಉತ್ತಮವಾದುದನ್ನು ನೀಡಲು ಬಯಸುತ್ತೇವೆ ಎಂದರು.
ಇತ್ತೀಚಿನ ದಿನಗಳಲ್ಲಿ ಪ್ರಯಾಣಿಕರು ಬಸ್ ಬುಕ್ ಮಾಡುವ ವೇಳೆಯೇ ಶೌಚಾಲಯದ ವ್ಯವಸ್ಥೆ ಇದೆಯೇ ಎಂಬುದನ್ನು ಕೇಳಿ ಬುಕ್ ಮಾಡುತ್ತಿದ್ದಾರೆ. ಶೌಚಾಲಯದ ವ್ಯವಸ್ಥೆ ಇರುವುದರಿಂದ ಪ್ರಯಾಣ ಅವಧಿ ಕೂಡ ಕಡಿಮೆಯಾಗಲಿದೆ. ಶೌಚಕ್ಕಾಗಿ ಒಂದೆಡೆ ಬಸ್ ನಿಲ್ಲಿಸಿದರೆ ಅರ್ಧ ಗಂಟೆ ಸಮಯ ವ್ಯರ್ಥವಾಗುತ್ತಿತ್ತು. ಈ ಸಮಯ ಉಳಿಯುವುದರಿಂದ ನಿಗದಿತ ಸಮಯಕ್ಕಿಂತ ಮೊದಲೇ ನಿಗದಿತ ಸ್ಥಳವನ್ನು ತಲುಲಿದರೆ, ಪ್ರಯಾಣಿಕರ ಪ್ರಯಾಣದ ಅವಧಿ ಕಡಿಮೆಯಾಗಿ ಬೇಗ ಸ್ಥಳವನ್ನು ತಲುಪಲಿದ್ದಾರೆ ಎಂದರು.

ಅನುಮಾನವೇ ಬೇಡ, ವೋಲ್ವೋ ನೆಕ್ಟ್ ಲೆವೆಲ್: ಶಿವಾ ಸಂಕೇಶ್ವರ
ಎಲ್ಲ ಬಸ್‌ಗಳನ್ನು ಒಂದು ಕಡೆ ನಿಲ್ಲಸಿದರೆ, ವೋಲ್ವೋ ಮತ್ತೊಂದು ಕಡೆ ನಿಲ್ಲಲ್ಲಿದೆ. ವೋಲ್ವೋಗೆ ತನ್ನದೇ ವಿಶೇಷತೆ ಮತ್ತು ಆಕರ್ಷಕ ಹೊರನೋಟವಿದೆ. ಆದ್ದರಿಂದಲೇ ಹೇಳುತ್ತಿದ್ದೇನೆ, ಅನುಮಾನವೇ ಬೇಡ, ವೋಲ್ವೋ ನೆಕ್ಟ್ ಲೆವೆಲ್‌ಗೆ ಇದೆ. ಈ ಮೊದಲು ಸ್ವೀಡನ್‌ನಲ್ಲಿ ಉತ್ಪಾದನೆ ಮಾಡಲಾಗುತ್ತಿತ್ತು. ಈಗ ಹೊಸಕೋಟೆ ಘಟಕದಲ್ಲಿಯೇ ಎಲ್ಲ ಬಸ್‌ಗಳನ್ನು ಉತ್ಪಾದನೆ ಮಾಡಲಾಗುತ್ತಿದೆ ಎಂದು ವಿಜಯಾನಂದ ಟ್ರಾವೆಲ್ಸ್ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಶಿವ ಸಂಕೇಶ್ವರ ತಿಳಿಸಿದರು.

ಸುರಕ್ಷತೆ, ವಿಶ್ವಾಸಾರ್ಹತೆಯ ಪಾಲುದಾರಿಕೆ: ಶ್ರೀನಿವಾಸ್
ಈ ಹೂಡಿಕೆಯು ತಂತ್ರಜ್ಞಾನ, ಸುರಕ್ಷತಾ ಇಂಜಿನಿಯರಿಂಗ್ ಮತ್ತು ಸೇವಾ ಪರಿಸರ ವ್ಯವಸ್ಥೆಯಲ್ಲಿ ನಿರಂತರ ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ ಎಂದು ವೋಲ್ವೋ ಸಂಸ್ಥೆಯ ಎಂಡಿ ಮತ್ತು ಸಿಇಒ ಬಿ. ಶ್ರೀನಿವಾಸ್ ತಿಳಿಸಿದರು.
ಭಾರತದಲ್ಲಿ ವೋಲ್ವೋ ಬಸ್‌ಗಳ ಅತ್ಯಂತ ಮೌಲ್ಯಯುತ ಮತ್ತು ದೀರ್ಘಕಾಲೀನ ಖಾಸಗಿ ಆಪರೇಟರ್ ಪಾಲುದಾರರಲ್ಲಿ ವಿಜಯಾನಂದ ಟ್ರಾವೆಲ್ಸ್ ಒಂದಾಗಿದೆ. ಈ ಹೆಗ್ಗುರುತು ಆದೇಶವು ದಶಕಗಳಿಂದ ನಿರ್ಮಿಸಲಾದ ನಂಬಿಕೆಗೆ ಪ್ರಬಲ ಸಾಕ್ಷಿಯಾಗಿದೆ. ಪ್ರಯಾಣಿಕರ ಸುರಕ್ಷತೆ, ಸೌಕರ್ಯ ಮತ್ತು ವಿಶ್ವಾಸಾರ್ಹತೆಗೆ ಅತ್ಯುನ್ನತ ಮಾನದಂಡವನ್ನು ನಿಗದಿಪಡಿಸುವ ನಿರ್ವಾಹಕರಿಗೆ ಆದ್ಯತೆಯ ವೇದಿಕೆಯಾಗಲು ನಾವು ಅಪಾರ ಹೆಮ್ಮೆಪಡುತ್ತೇವೆ ಎಂದರು.

ವಿಮಾನ ಮಾದರಿ ಶೌಚಾಲಯ ವ್ಯವಸ್ಥೆ
ಸಾಮಾನ್ಯವಾಗಿ ದೂರದ ಪ್ರಯಾಣದ ವೇಳೆ ಅಗತ್ಯವಾಗಿ ಬೇಕಾಗಿರುವುದು ಶೌಚಾಲಯ. ಹಿರಿಯ ನಾಗರಿಕರು, ಮಹಿಳೆಯರು ಮತ್ತು ಮಕ್ಕಳು ಪ್ರಯಾಣಕ್ಕೆ ಶೌಚಾಲಯವಿದ್ದರೆ ಆರಾಯಾಗಿ ಪ್ರಯಾಣ ಮಾಡಬಹುದು. ವೋಲ್ವೋ 9600 ಕೋಚ್‌ನಲ್ಲಿ ವಿಮಾನದಲ್ಲಿರುವಂತೆ ಶೌಚಾಲಯದ ವ್ಯವಸ್ಥೆ ಇದೆ. ಇದರಿಂದ ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದ ಕೋಚ್ ಆಗಿದೆ. ಶೌಚಕ್ಕೆ ಹೋದಾಗಲೂ ಬಸ್ ಕುಲುಕುವುದಿಲ್ಲ. ಮನೆಗಳಲ್ಲಿನ ಶೌಚಕ್ಕೆ ಹೋದಾಗ ಆಗುವ ಅನುಭವವೇ ಇಲ್ಲಿಯೂ ಆಗಲಿದೆ.
ಆರಾಮದಾಯಕ ಸೀಟುಗಳು
ನೂರಾರು ಕಿಮೀ ಪ್ರಯಾಣ ಮಾಡುವುದರಿಂದ ಸ್ಲೀಪರ್ ಕೋಚ್‌ಗಳಲ್ಲಿನ ಸೀಟುಗಳು ಬಹಳ ಮುಖ್ಯ ಪಾತ್ರ ವಹಿಸಲಿವೆ. ಮೃದುವಾದ ಸೀಟುಗಳನ್ನು ಅಳವಡಿಸಲಾಗಿದ್ದು, ಗ್ರಾಹಕರು ತಮ್ಮ ಮನೆಯಲ್ಲಿ ಮಲಗಿರುವ ಭಾವನೆ ಬರಲಿದೆ. ಸೀಟುಗಳು ವಿಶಾಲವಾಗಿದ್ದು, ಎಲ್ಲಿಯೂ ಕಿಷ್ಕಿಂಧೆ ಎನಿಸುವುದಿಲ್ಲ. ನೂರಾರು ಕಿಮೀ ದೂರ ಪ್ರಯಾಣಿಸಿದರೂ ಮೈಕೈ ನೋವು ಬಾರದಂತೆ ಆರಾಮದಾಯಕವಾಗಿರುವಂತೆ ಮಾಡಿರುವುದು ಪ್ರಯಾಣಿಕರ ಆಕರ್ಷಣೆಯಾಗಿದೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

1,000 ಬಡ ವಿದ್ಯಾರ್ಥಿಗಳಿಗೆ ಶ್ರೀರಾಮ್ ಫೈನಾನ್ಸ್ ವಿದ್ಯಾರ್ಥಿವೇತನ


ವಿಜಯಪುರ: ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್‌ನ ವಿಜಯಪುರ ರೀಜನ್ ವತಿಯಿಂದ ನಗರದ ಆನಂದನಗರದಲ್ಲಿರುವ ಭಾವಸಾರ ಕ್ಷತ್ರೀಯ ಮಂಗಲ ಕಾರ್ಯಾಲಯದಲ್ಲಿ ಬೃಹತ್ ವಿದ್ಯಾರ್ಥಿವೇತನ ವಿತರಣಾ ಸಮಾರಂಭ ನಡೆಯಿತು. ಕಾರ್ಯಕ್ರಮದಲ್ಲಿ ಸುಮಾರು 1,000 ವಿದ್ಯಾರ್ಥಿಗಳು ವಿದ್ಯಾರ್ಥಿವೇತನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜೋನಲ್ ಬಿಸಿನೆಸ್ ಹೆಡ್ ಚೆನ್ನನಗೌಡ ಎಚ್. ಮಾತನಾಡಿ, ಶಿಕ್ಷಣದಿಂದ ಯಾವುದೇ ಮಗು ವಂಚಿತವಾಗಬಾರದು ಎಂಬ ಉದ್ದೇಶದಿಂದ ಸಂಸ್ಥೆ ವಿದ್ಯಾರ್ಥಿವೇತನ ಯೋಜನೆಯನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು.

1974ರಲ್ಲಿ ಆರಂಭಗೊಂಡ ಸಂಸ್ಥೆ, 1979ರಲ್ಲಿ ಶ್ರೀರಾಮ್ ಟ್ರಾನ್ಸ್‌ಪೋರ್ಟ್ ಫೈನಾನ್ಸ್ ಆಗಿ ಕಾರ್ಯನಿರ್ವಹಿಸಿ, ಇದೀಗ ಶ್ರೀರಾಮ್ ಫೈನಾನ್ಸ್ ಲಿಮಿಟೆಡ್ ಆಗಿ ದೇಶದ ಪ್ರಮುಖ ಎನ್‌ಬಿಎಫ್‌ಸಿ ಸಂಸ್ಥೆಗಳಲ್ಲಿ ಒಂದಾಗಿ ಬೆಳೆದಿದೆ. ಸಂಸ್ಥಾಪಕ ಪದ್ಮಭೂಷಣ ಆರ್. ತ್ಯಾಗರಾಜನ್ ಅವರ ದೂರದೃಷ್ಟಿಯಂತೆ ಚಾಲಕರು ಹಾಗೂ ಸಣ್ಣ ವ್ಯಾಪಾರಿಗಳನ್ನು ಆರ್ಥಿಕವಾಗಿ ಸಬಲಗೊಳಿಸುವ ಕಾರ್ಯಕ್ಕೆ ಸಂಸ್ಥೆ ಆದ್ಯತೆ ನೀಡಿದೆ ಎಂದು ತಿಳಿಸಿದರು.

ಲಾರಿ ಹಾಗೂ ಟ್ರಕ್ ಚಾಲಕರು, ಕ್ಲೀನರ್‌ಗಳು ತಮ್ಮ ವೃತ್ತಿಯ ನಿಮಿತ್ತ ಸದಾ ಊರೂರು ಸಂಚರಿಸುವುದರಿಂದ ಅವರ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯ ಅಡಚಣೆಯಾಗಬಾರದು ಎಂಬ ಉದ್ದೇಶದಿಂದ ಈ ವಿದ್ಯಾರ್ಥಿವೇತನ ಯೋಜನೆ ರೂಪಿಸಲಾಗಿದೆ. ವಿಶೇಷವಾಗಿ ಚಾಲಕರ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡುವ ಮೂಲಕ ಅವರ ವಿದ್ಯಾಭ್ಯಾಸ ಮುಂದುವರಿಸಲು ಸಂಸ್ಥೆ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಬಡ ಕುಟುಂಬಗಳ ಪ್ರತಿಭಾವಂತ ಮಕ್ಕಳು ಆರ್ಥಿಕ ಸಮಸ್ಯೆಯಿಂದ ಶಿಕ್ಷಣ ಮೊಟಕುಗೊಳಿಸಬಾರದು ಎಂಬ ಆಶಯದಿಂದ ದೇಶಾದ್ಯಂತ ಪ್ರತಿವರ್ಷ 30 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಂಸ್ಥೆ ವಿದ್ಯಾರ್ಥಿವೇತನ ನೀಡುತ್ತಿದೆ ಎಂದರು.

8ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,000 ಹಾಗೂ ಪಿಯುಸಿ 11 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ವಾರ್ಷಿಕ ₹4,500 ವಿದ್ಯಾರ್ಥಿವೇತನ ನೀಡಲಾಗುತ್ತಿದೆ. ಕನಿಷ್ಠ ಶೇ.60 ಅಂಕ ಗಳಿಸುವ ಅರ್ಹ ವಿದ್ಯಾರ್ಥಿಗಳಿಗೆ ಈ ನೆರವನ್ನು ನಿರಂತರವಾಗಿ ಒದಗಿಸಲಾಗುತ್ತಿದೆ ಎಂದು ವಿವರಿಸಿದರು.

ಶ್ರೀರಾಮ್ ಫೌಂಡೇಶನ್ ಮೂಲಕ ವಿದ್ಯಾರ್ಥಿವೇತನದ ಜತೆಗೆ ವಿವಿಧ ಸಮಾಜಮುಖಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಕಿವುಡ ಮಕ್ಕಳ ಶಾಲೆ ನಡೆಸುವುದು, ವೃದ್ಧಾಶ್ರಮಗಳ ನಿರ್ವಹಣೆ, ಪರಿಸರ ಸಂರಕ್ಷಣೆಗಾಗಿ ಗಿಡ ನೆಡುವುದು, ಸ್ವಚ್ಛತಾ ಕಾರ್ಯಕ್ರಮಗಳು ಹಾಗೂ ಅಂಧ ಮಕ್ಕಳಿಗೆ ನೆರವು ಸೇರಿದಂತೆ ಹಲವು ಸಾಮಾಜಿಕ ಸೇವಾ ಕಾರ್ಯಗಳನ್ನು ಸಂಸ್ಥೆ ನಡೆಸುತ್ತಿದೆ ಎಂದು ತಿಳಿಸಿದರು.

ಮಸೂತಿಯ ಜಗದೀಶ್ವರ ಹಿರೇಮಠದ ಶ್ರೀ ಮ.ಘ.ಚ. ಪ್ರಭುಕುಮಾರ ಶಿವಾಚಾರ್ಯ ಮಹಾಸ್ವಾಮಿಗಳು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿದರು.

ಹಿರಿಯ ವೈದ್ಯ ಡಾ. ಎಲ್.ಎಚ್. ಬಿದರಿ ಮಾತನಾಡಿ, ಶ್ರೀರಾಮ್ ಫೈನಾನ್ಸ್ ನೀಡುತ್ತಿರುವ ವಿದ್ಯಾರ್ಥಿವೇತನವನ್ನು ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಂಡು, ಶಿಕ್ಷಣದತ್ತ ಹೆಚ್ಚಿನ ಗಮನ ಹರಿಸಬೇಕು. ಆರ್ಥಿಕ ನೆರವು ತಮ್ಮ ಭವಿಷ್ಯ ರೂಪಿಸಿಕೊಳ್ಳಲು ದೊರೆತಿರುವ ಉತ್ತಮ ಅವಕಾಶವಾಗಿದ್ದು, ಪರಿಶ್ರಮ, ಶಿಸ್ತು ಹಾಗೂ ಆತ್ಮವಿಶ್ವಾಸದಿಂದ ಮುನ್ನಡೆದು ಸಮಾಜಕ್ಕೆ ಕೊಡುಗೆ ನೀಡುವ ವ್ಯಕ್ತಿಗಳಾಗಬೇಕು ಎಂದು ಪ್ರೇರೇಪಿಸಿದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ವಿ. ಹೊಸೂರ, ವಿಜಯಪುರ ಮಹಾನಗರ ಪಾಲಿಕೆ ಮಹಾಪೌರ ಮಡಿವಾಳಪ್ಪ ಕರಡಿ, ವಿ.ಡಿ.ಎ ಅಧ್ಯಕ್ಷ ಗಂಗಾಧರ ಸಂಬಣ್ಣಿ, ಮಹಾನಗರ ಪಾಲಿಕೆ ಸದಸ್ಯೆ ರಶ್ಮಿ ಬಿ. ಕೋರಿ, ಲಾರಿ ಅಸೋಸಿಯೇಶನ್ ಅಧ್ಯಕ್ಷ ಆಸೀಫ್ ಎಲ್. ಬಗಲಿ (ಪಟ್ಟೇಲ), ಗುತ್ತಿಗೆದಾರರ ಸಂಘದ ಉಪಾಧ್ಯಕ್ಷ ಎಚ್.ಆರ್. ಚಿಂಚಲಿ ಭಾಗವಹಿಸಿದ್ದರು.

ವಿಜಯಪುರ ರೀಜನಲ್ ಬಿಸಿನೆಸ್ ಹೆಡ್ ಉಮೇಶ ಬಿರಾದಾರ ಹಾಗೂ ಸಿಬ್ಬಂದಿ ವರ್ಗದವರು ಆಗಮಿಸಿದ ಎಲ್ಲ ಅತಿಥಿ-ಗಣ್ಯರನ್ನು, ವಿದ್ಯಾರ್ಥಿಗಳನ್ನು ಹಾಗೂ ಪಾಲಕರನ್ನು ಸ್ವಾಗತಿಸಿ ಸತ್ಕರಿಸಿದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



Saturday, September 5, 2026

ಅರ್ಜುನ್ ರಾಠೋಡ್ ಅವರನ್ನು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ


ವಿಜಯಪುರ: ಬಂಜಾರ ಸಮಾಜದ ಹಿರಿಯ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡರಾದ ಶ್ರೀ ಅರ್ಜುನ್ ರಾಠೋಡ್ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ವಿಜಯಪುರ ಜಿಲ್ಲಾ ಬಂಜಾರ ಸಮಾಜ ಹಾಗೂ ಕಾಂಗ್ರೆಸ್ ಬಂಜಾರಾ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಚಿವ ರುದ್ರಪ್ಪ ಲಮಾಣಿ ಹಾಗೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಮಾಜದ ಮುಖಂಡರು ಮುಂದಾಗಿದ್ದಾರೆ.
ಅರ್ಜುನ್ ರಾಠೋಡ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಂಜಾರ ಸಮಾಜದ ವಿವಿಧ ಸಮಸ್ಯೆಗಳು, ಹಕ್ಕುಗಳು ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ನಿರಂತರವಾಗಿ ಧ್ವನಿ ಎತ್ತಿಕೊಂಡು ಬಂದಿದ್ದಾರೆ. ಅವರು ಬಂಜಾರ ಮಹಾಸಭೆಯ ಅಧ್ಯಕ್ಷರಾಗಿ ಹಾಗೂ ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿ ಸಮಾಜ ಮತ್ತು ಪಕ್ಷದ ಸಂಘಟನೆಗೆ ಸೇವೆ ಸಲ್ಲಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಬಂಜಾರ ಸಮಾಜದ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸಮಾಜದ ಮತಗಳು ನಿರ್ಣಾಯಕವಾಗಿವೆ. ಅರ್ಜುನ್ ರಾಠೋಡ್ ಅವರು ಪ್ರಬಲ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದರೂ ಪಕ್ಷದ ಟಿಕೆಟ್ ದೊರೆಯದ ಸಂದರ್ಭದಲ್ಲಿ ಪಕ್ಷದ ನಿಷ್ಠೆ ತೋರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಪರವಾಗಿ ಸಚಿವ ಎಂ.ಬಿ. ಪಾಟೀಲ ಹಾಗೂ ಅರ್ಜುನ್ ರಾಠೋಡ್ ಅವರ ನೇತೃತ್ವದಲ್ಲಿ ಬಂಜಾರ ಸಮಾಜದ ಬೃಹತ್ ಸಮಾವೇಶ ಆಯೋಜಿಸಿ ಬೆಂಬಲ ನೀಡಲಾಗಿತ್ತು ಎಂದು ಮುಖಂಡರು ಹೇಳಿದ್ದಾರೆ.
ಪಕ್ಷದ ಮೇಲಿನ ನಿಷ್ಠೆ, ಸಮಾಜ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ನಾಯಕತ್ವದ ಅನುಭವವನ್ನು ಪರಿಗಣಿಸಿ ಅರ್ಜುನ್ ರಾಠೋಡ್ ಅವರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಂಜಾರ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಮನವಿಗೆ ಜಗನು ಮಹಾರಾಜ, ಸೋಮನಿಂಗ್ ಸ್ವಾಮೀಜಿ, ಧನಶಿಂಗ ಮಹಾರಾಜ್, ಗೋಪಾಲ ಮಹಾರಾಜರು, ಅಮರ್ಶಿಂಗ ಮಹಾರಾಜರು, ಸಂಜು ಮಹಾರಾಜರು, ಪ್ರಕಾಶ ಮಹಾರಾಜರು, ಭೀಮಶಿಂಗ ಮಹಾರಾಜರು ಸೇರಿದಂತೆ ಸಮಾಜದ ಧಾರ್ಮಿಕ ಮುಖಂಡರು ಹಾಗೂ ಆಡಿ ರಾಜೇಂದ್ರಪ್ರಸಾದ, ಬಿಬಿ ನಾಯಕ, ರಾಜಪಾಲ ಚವಾಣ್, ಡಿ.ಎಲ್. ಚವಾಣ್, ಶಂಕರ ಚವಾಣ್, ರಾಜು ಜಾಧವ್, ಮಲ್ಲಿಕಾರ್ಜುನ ನಾಯಕ, ಈಶ್ವರ ಜಾಧವ್, ಶೇಖರ ನಾಯ್ಕ್, ಲಿಂಬಾಜಿ ರಾಠೋಡ, ವಾಮನ ಚವಾಣ್, ಮಹಾದೇವ ರಾಠೋಡ, ಎಸ್.ಆರ್. ನಾಯ್ಕ್, ಎಂ.ಎಸ್. ನಾಯಕ್, ಅಶೋಕ ರಾಠೋಡ, ನಾತು ಪವಾರ, ಪದ್ದು ಚವಾಣ್, ಸತೀಶ ನಾಯಕ, ತುಕಾರಾಮ್ ರಾಠೋಡ, ಪ್ರಕಾಶ ರಾಠೋಡ, ಗೋವಿಂದ ರಾಠೋಡ, ಮಿಟ್ಟು ಚವಾಣ್, ಅನಿಲ್ ಚವಾಣ್, ಅಮೇಶಿ ರಾಠೋಡ, ಸುನೀಲ್ ಚವಾಣ್, ರಾಜು ಪವಾರ, ಸುರೇಶ ಪವಾರ ಸೇರಿದಂತೆ ಹಲವು ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಂಜಾರ ಸಮಾಜದ ಹಿತಾಸಕ್ತಿ ಹಾಗೂ ಜಿಲ್ಲೆಯ ರಾಜಕೀಯ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಅರ್ಜುನ್ ರಾಠೋಡ್ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ವಿಜಯಪುರ ಜಿಲ್ಲಾ ಬಂಜಾರ ಸಮಾಜದ ಮುಖಂಡ ಪ್ರಕಾಶ ಗಂಗಾರಾಮ್ ರಾಠೋಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



ಎಂ.ಎಸ್. ಖೇಡ್ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ವಿಜಯಪುರ: ನಗರದ ಎಂ.ಎಸ್. ಖೇಡ್ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಸಂಸ್ಥೆಯ ಖಜಾಂಚಿ ವಿನೋದ ಎಂ. ಖೇಡ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ, ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಕ್ಷರ ಕಲಿಸಿ ಜ್ಞಾನವನ್ನು ನೀಡುವವರು ಶಿಕ್ಷಕರು; ಜ್ಞಾನ ನೀಡಿ ಬದುಕಿನ ದಾರಿಯನ್ನು ತೋರಿಸುವವರು ಗುರುಗಳು” ಎಂದು ಶಿಕ್ಷಕರ ಮಹತ್ವವನ್ನು ವಿವರಿಸಿದರು. ನಮ್ಮ ಬದುಕಿಗೆ ದಾರಿದೀಪವಾಗಿ, ಜ್ಞಾನದ ಬೆಳಕನ್ನು ಹರಿಸಿ, ಉತ್ತಮ ಭವಿಷ್ಯ ರೂಪಿಸುವ ಗೌರವಾನ್ವಿತ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸುವ ದಿನವೇ ಶಿಕ್ಷಕರ ದಿನಾಚರಣೆ ಎಂದು ತಿಳಿಸಿದರು. ಇದೇ ವೇಳೆ ಶಿಕ್ಷಕ ಸಮುದಾಯಕ್ಕೆ ಮತ್ತೊಮ್ಮೆ ಶಿಕ್ಷಕರ ದಿನದ ಶುಭಾಶಯಗಳನ್ನು ಕೋರಿದರು.

ಶಾಲೆಯ ಮುಖ್ಯಗುರು ಸೀತಾ ಲಮಾಣಿ ಅವರು ಮಾತನಾಡಿ, “ಮುಗ್ಧ ಮನದಲ್ಲಿ ಅಕ್ಷರ ಬಿತ್ತಿ, ಮಕ್ಕಳ ಭವಿಷ್ಯಕ್ಕೆ ಬೆಳಕನ್ನು ಚೆಲ್ಲಿ, ಸುಂದರ ನಾಡು ಕಟ್ಟುವ ಅದ್ಭುತ ಶಿಲ್ಪಿಗಳು ಶಿಕ್ಷಕರು” ಎಂದು ಶಿಕ್ಷಕರ ಸೇವೆ ಹಾಗೂ ಜವಾಬ್ದಾರಿಯನ್ನು ಕೊಂಡಾಡಿದರು.

ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕಿಯರಾದ ಶ್ರೀದೇವಿ ಸೊನ್ನದ ಹಾಗೂ ಗಂಗೂಬಾಯಿ ಹಂಗರಗಿ ಸೇರಿದಂತೆ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಿಕ್ಷಕರಿಗೆ ಶುಭಾಶಯಗಳನ್ನು ಸಲ್ಲಿಸಲಾಯಿತು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.


ವಿಜಯಪುರ ಜಿಲ್ಲೆಯ 13 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಜೆಡಿಎಸ್ ಆಗ್ರಹ

ವಿಜಯಪುರ: ಜಿಲ್ಲೆಯಲ್ಲಿ ಮಳೆ ಅಭಾವದಿಂದ ತೀವ್ರ ಬರಪರಿಸ್ಥಿತಿ ನಿರ್ಮಾಣವಾಗಿದ್ದು, ವಿಜಯಪುರ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣವೇ ‘ಬರಪೀಡಿತ ತಾಲೂಕುಗಳು’ ಎಂದು ಘೋಷಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿ ಜಾತ್ಯತೀತ ಜನತಾದಳ (ಜೆಡಿಎಸ್) ವತಿಯಿಂದ ಶನಿವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಯಿತು.

ಜೆಡಿಎಸ್ ಜಿಲ್ಲಾ ಅಧ್ಯಕ್ಷರಾದ ಮಲ್ಲಿಕಾರ್ಜುನ ಯಂಡಿಗೇರಿ ಅವರ ನೇತೃತ್ವದಲ್ಲಿ ಜಿಲ್ಲಾ ಜೆಡಿಎಸ್ ಕಚೇರಿಯಿಂದ ಮೆರವಣಿಗೆ ಮೂಲಕ ರೈತ ಮುಖಂಡರು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ತೆರಳಿದ ಪ್ರತಿಭಟನಾಕಾರರು ಧರಣಿಗೆ ಬೆಂಬಲ ಸೂಚಿಸಿದರು. ಬಳಿಕ ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ಮಳೆ ಕೊರತೆಯಿಂದ ಜಿಲ್ಲೆಯಾದ್ಯಂತ ಕೃಷಿ ಚಟುವಟಿಕೆಗಳು ತೀವ್ರವಾಗಿ ಹದಗೆಟ್ಟಿದ್ದು, ಬೆಳೆ ನಷ್ಟದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ಯಾವುದೇ ವಿಳಂಬವಿಲ್ಲದೆ ಬರಪೀಡಿತ ತಾಲೂಕುಗಳೆಂದು ಘೋಷಿಸಿ ರೈತರಿಗೆ ಅಗತ್ಯ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

13 ತಾಲೂಕುಗಳಿಗೂ ಬರಪೀಡಿತ ಸ್ಥಾನಮಾನ: ಮಳೆ ಕೊರತೆ ಹಾಗೂ ಬೆಳೆ ನಷ್ಟದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ 13 ತಾಲೂಕುಗಳನ್ನು ತಕ್ಷಣ ಅಧಿಕೃತವಾಗಿ ಬರಪೀಡಿತ ತಾಲೂಕುಗಳೆಂದು ಘೋಷಿಸಬೇಕು. ಬೆಳೆ ಪರಿಹಾರ ಬಿಡುಗಡೆ: ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಬೆಳೆ ಪರಿಹಾರಧನವನ್ನು ಶೀಘ್ರವಾಗಿ ಬಿಡುಗಡೆ ಮಾಡಬೇಕು. ಕುಡಿಯುವ ನೀರು ಮತ್ತು ಮೇವಿನ ವ್ಯವಸ್ಥೆ: ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದAತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಅಗತ್ಯ ಮೇವು ಲಭ್ಯವಾಗುವಂತೆ ತಾಲೂಕುವಾರು ಮೇವಿನ ಬ್ಯಾಂಕ್‌ಗಳನ್ನು ತೆರೆಯಬೇಕು. ಸಾಲ ವಸೂಲಾತಿ ತಡೆ: ಬರಪರಿಸ್ಥಿತಿ ಹಿನ್ನೆಲೆಯಲ್ಲಿ ರೈತರ ಕೃಷಿ ಸಾಲ ವಸೂಲಾತಿಯನ್ನು ತಕ್ಷಣ ತಡೆಹಿಡಿದು, ಸಾಲ ಮರುಪಾವತಿಗೆ ಸೂಕ್ತ ವಿನಾಯಿತಿ ನೀಡಬೇಕು ಎಂದು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ಮಾಜಿ ಶಾಸಕ ಬಿ.ಜಿ. ಪಾಟೀಲ, ಮುಖಂಡರಾದ ಸೋಮವಾರ ಪಾಟೀಲ, ಪಂಚಪ್ಪ ಕಲಬುರ್ಗಿ, ಖಾದ್ರಿ ಇನಾಂದಾರ್, ರಾಜು ಹಿಪ್ಪರಗಿ, ಅಪ್ಸರಾ ಬೇಗಂ ಚಪ್ಪರಬಂದ, ಮಾದೇವಿ ಪಾಟೀಲ, ಶಾಂತಾ ಲಮಾಣಿ, ಪ್ರಕಾಶ ಹಿರೇಕುರುಬರ, ಗುರುನಗೌಡ ಪಾಟೀಲ, ಭಾಗಾಯತ್ ರಾಜು ಹಿರೇಮಠ, ಶಂಕರ್ ಹಾಲಹಳ್ಳಿ, ಮಲ್ಲು ತೊರವಿ, ಮುತ್ತು ಜಂಗಮಶೆಟ್ಟಿ, ಶರಣಗೌಡ ಪಾಟೀಲ, ಬಸವರಾಜ ಹೊನವಾಡ, ಪ್ರಶಾಂತ್ ಕಿನಗಿ ಹಾಗೂ ಪೀರ್ ಗಚ್ಚಿನಮಲ್, ಎಂ ಎನ್ ಪಾಟೀಲ್, ಹುಸೇನ್ ಬಾಗಾಯತ್, ರೇವಣಸಿದ್ಧ ಕುಮಟೆ, ಶಿವಾಜಿ ಸಿಂಗಾಡಿ, ಸೇರಿದಂತೆ ಜೆಡಿಎಸ್ ಪಕ್ಷದ ಜಿಲ್ಲಾ ಮಟ್ಟದ ಮುಖಂಡರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.