Monday, September 22, 2025
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಸರ್ಕಾರಕ್ಕೆ ಮನವರಿಕೆ ಮಾಡಿಸುವೆ ಜಿಲ್ಲೆಗೆ ನನ್ನ ಕೊಡುಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿದೆ ಸಾಕ್ಷಿ 100 ಕೋಟಿ ರೂ. ಕೊಡಿ ಸಾಕು- ಸಚಿವ ಶಿವಾನಂದ ಪಾಟೀಲ
ವಿಜಯಪುರ : ನಾನು ಆರೋಗ್ಯ ಸಚಿವನಾಗಿದ್ದಾಗ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸಂಪನ್ಮೂಲ, ಸೌಲಭ್ಯ ಕಲ್ಪಿಸಿದ್ದೇನೆ. ಹೀಗಾಗಿ ಖಾಸಗಿ ಸಹಭಾಗಿತ್ವದ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಅಗತ್ಯದ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಅವರಿಗೆ ಮನವರಿಕೆ ಮಾಡಿಕೊಡುವುದಾಗಿ ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಭರವಸೆ ನೀಡಿದರು.
ನಗರದ ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದಿರುವ ಸರ್ಕಾರ ಘೋಷಿಸಿರುವ ಖಾಸಗಿ ಸಹಭಾಗಿತ್ವದ ಬದಲಾಗಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಡೆದಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಭೇಟಿ ನೀಡಿ, ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದ ಸಚಿವರು, ಅವಿಭಜಿತ ವಿಜಯಪುರ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿರುವ ಬಂಥನಾಳ ಶಿವಯೋಗಿಗಳ ಹೆಸರಿನಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕೆಂಬ ಕನಸಿದೆ. ಇದಕ್ಕಾಗಿ ನಾನು ಆರೋಗ್ಯ ಸಚಿವನಾಗಿದ್ದ ಸಂದರ್ಭದಲ್ಲಿ ಸರ್ಕಾರಿ ಕಾಲೇಜು ಆರಂಭಕ್ಕೆ ಬೇಕಿರುವ ಎಲ್ಲ ಸೌಲಭ್ಯ ಕಲ್ಪಿಸಿದ್ದೇನೆ ಎಂದು ವಿವರಿಸಿದರು.
ಹೊಸದಾಗಿ ಸರ್ಕಾರಿ ಕಾಲೇಜು ಸ್ಥಾಪನೆಗೆ ಕನಿಷ್ಟ 500 ಕೋಟಿ ರೂ. ಬೇಕು. ಆದರೆ ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ನಾನು ಸಚಿವನಾಗಿ ಅಗತ್ಯ ಸೌಲಭ್ಯ ಕಲ್ಪಿಸಿದ್ದೇನೆ. ಹೀಗಾಗಿ ಸರ್ಕಾರ ಆರಂಭದಲ್ಲಿ 50 ಕೋಟಿ ರೂ.ನಂತೆ ಕೇವಲ 100 ಕೋಟಿ ರೂ. ಅನುದಾನ ನೀಡಿದರೂ ಸಾಕು ಎಂದರು.
ವಿಜಯಪುರ ಜಿಲ್ಲೆಗೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ 2013 ರಿಂದಲೂ ನಾನು ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಪ್ರಯತ್ನಿಸುತ್ತಿದ್ದೇನೆ. ಆಗ ಮುಖ್ಯಮಂತ್ರಿ ಆಗಿದ್ದ ಸಿದ್ಧರಾಮಯ್ಯ ಹಾಗೂ ಈ ಹಿಂದೆ ಅಧಿಕಾರದಲ್ಲಿದ್ದ ಬಸವರಾಜ ಬೊಮ್ಮಾಯಿ ಇಬ್ಬರೂ ಈ ವಿಷಯವಾಗಿ ನನಗೆ ಸದನದಲ್ಲೂ ಭರವಸೆ ನೀಡಿದ್ದರು. ಆದರೂ ರಾಜ್ಯದಲ್ಲಿ ಮಾತ್ರವಲ್ಲ ದೇಶದ ಯಾವುದೇ ರಾಜ್ಯದಲ್ಲಿ ಇಲ್ಲದ ಖಾಸಗಿ ಸಹಭಾಗಿತ್ವದ ವೈದ್ಯಕೀಯ ಕಾಲೇಜು ಅನುಷ್ಠಾನ ವಿಜಯಪುರ ಜಿಲ್ಲೆಗೆ ಮಾತ್ರ ಏಕೆ ಎಂಬುದು ನನಗೂ ಅರ್ಥವಾಗುತ್ತಿಲ್ಲ ಎಂದರು
ವಿಜಯಪುರ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಸ್ಥಾಪನೆಗೆ ಅಗತ್ಯವಾದ ಸುಪರ್ ಸ್ಪೆಶಾಲಿಟಿ ಆಸ್ಪತ್ರೆ, ಟ್ರಾಮಾ ಸೆಂಟರ್, ಎಂ.ಆರ್.ಐ. ಸ್ಕ್ಯಾನಿಂಗ್ ಸೆಂಟರ್, ರಾಜ್ಯದಲ್ಲೇ ಎಲ್ಲೂ ಇಲ್ಲದ 150 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ಬಿಎಸ್ಸಿ ನರ್ಸಿಂಗ್ ಹಾಗೂ ಡಿಪ್ಲೊಮಾ ನರ್ಸಿಂಗ್ ಕಾಲೇಜುಗಳು, 150 ಎಕರೆ ವಿಸ್ತೀರ್ಣದ ಸರ್ಕಾರಿ ಆಸ್ಪತ್ರೆ ಆಸ್ತಿ ಸಂರಕ್ಷಣೆಗಾಗಿ ಕಾಂಪೌಂಡ್ ನಿರ್ಮಿಸಿದ್ದೇನೆ ಎಂದು ವಿವರಿಸಿದರು.
ವಿಜಯಪುರ ಸರ್ಕಾರಿ ಜಿಲ್ಲಾ ಆಸ್ಪತ್ರೆಗೆ ಐತಿಹಾಸಿಕ ತಾಜ್ ಬಾವಡಿಯಿಂದ ನೀರಿನ ಸೌಲಭ್ಯ ಕಲ್ಪಿಸಿದ್ದು ಹಾಗೂ ರಾಜ್ಯದಲ್ಲಿ ಅತ್ಯಾಧುನಿಕ ಸೌಲಭ್ಯಗಳುಳ್ಳ ಆಯುಷ್ಯ ಆಸ್ಪತ್ರೆ ನಿರ್ಮಿಸಿದ್ದು ನನ್ನ ಅವಧಿಯಲ್ಲೇ ಎಂದು ವಿವರಿಸಿದರು.
ಬೆಳಗಾವಿ ಕಲಬುರಗಿ ವಿಭಾಗದ ಮಧ್ಯದಲ್ಲಿ ವಿಜಯಪುರದಲ್ಲಿ ಆರೋಗ್ಯ ಇಲಾಖೆಯ ಹೆಚ್ಚುವರಿ ನಿರ್ದೇಶಕರ ಹುದ್ದೆ ಸೃಷ್ಟಿಸಿದ್ದೇ ನಾನು. ನನ್ನ ಅವಧಿಯಲ್ಲಿ ನಿರ್ಮಿಸಿದ ಸುಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಈಚೆಗೆ ನಾನೇ ಸಂಪುಟ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ 200 ಹುದ್ದೆ ಮಂಜೂರು ಮಾಡಿಸಿದ್ದೇನೆ ಎನ್ನುವ ಮೂಲಕ ಸಚಿವನಾಗಿ ಮಾಡಿದ ಕೆಲಸಗಳು ಎಂದು ಜಿಲ್ಲೆಗೆ ಶಿವಾನಂದ ಪಾಟೀಲ ಅವರ ಕೊಡುಗೆ ಏನು ಎಂದು ಪ್ರಶ್ನಿಸುವವರಿಗೆ ಕಣ್ಣ ಮುಂದಿರುವ ದಾಖಲೆಗಳನ್ನು ಬಿಚ್ಚಿಟ್ಟರು.
ನಾನು ಬಸವವನಬಾಗೇವಾಡಿ ಕ್ಷೇತ್ರದಲ್ಲಿ ಸರ್ಕಾರಿ ಪದವಿ ಕಾಲೇಜು ಆರಂಭಿಸಿದ ಬಳಿಕವೇ ಜಿಲ್ಲಾ ಕೇಂದ್ರ ವಿಜಯಪುರದಲ್ಲಿ ಪದವಿ ಕಾಲೇಜು ಸ್ಥಾಪನೆ ಆಗಿದ್ದು. ನಮ್ಮ ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಮಾತ್ರವಲ್ಲ ಸರ್ಕಾರಿ ಎಂಜಿನಿಯರಿಂಗ್ ಹಾಗೂ ಕಾನೂನು ಕಾಲೇಜುಗಳಂಥ ಶೈಕ್ಷಣಿಕ ಸೌಲಭ್ಯಗಳೂ ಇಲ್ಲವಾಗಿವೆ.
ಏಮ್ಸ್ ತಂದರೆ ಸಂಸದ ಜಿಗಜಿಣಗಿಗೆ ಸನ್ಮಾನ
ಬಡ ಮಕ್ಕಳು ವೈದ್ಯಕೀಯ ಶಿಕ್ಷಣ ಪಡೆಯುವಂತಾಗಲು
ವಿಜಯಪುರ ಜಿಲ್ಲೆಗೆ ಏಮ್ಸ್ ಕಾಲೇಜು ಮಂಜೂರು ಮಾಡಿಸಿದರೆ ಸಂಸದ ರಮೇಶ ಜಿಗಜಿಣಗಿ ಅವರನ್ನು ಸನ್ಮಾನ ಮಾಡುತ್ತೇನೆ ಎಂದು ಜವಳಿ, ಸಕ್ಕರೆ, ಕಬ್ಬು ಅಭಿವೃದ್ಧಿ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.
ಕುರಿತು ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರೊಂದಿಗೆ ಮಾತನಾಡಿದ್ದೆ. ಆದರೆ ಧಾರವಾಡ, ರಾಯಚೂರು ಭಾಗದವರು ಪ್ರಯತ್ನ ಮಾಡಿದರು. ಈಗಲೂ ಕಾಲ ಮಿಂಚಿಲ್ಲ, ಸಂಸದ ಜಿಗಜಿಣಗಿ, ಜಿಲ್ಲೆಯ ಸಚಿವರು, ಶಾಸಕರು ಪಕ್ಷಾತೀತವಾಗಿ ಏಮ್ಸ್ ಕಾಲೇಜಿಗೆ ಪ್ರಯತ್ನ ಮಾಡಬೇಕು ಎಂದು ಮನವಿ ಮಾಡಿದರು.
ಧರಣಿಯಲ್ಲಿ ಪ್ರಮುಖರಾದ ಅರವಿಂದ ಕುಲಕರ್ಣಿ, ಪೂಜ್ಯ ಸಂಗನಬಸವ ಶ್ರೀಗಳು, ಅನೀಲ ಹೊಸಮನಿ, ಅಕ್ರಮ ಮಾಶ್ಯಾಳಕರ, ಅಪ್ಪಾಸಾಬ ಯರನಾಳ, ಡಾ. ಗೋಪಾಲ ದಾಬಡೆ, ಶ್ರೀನಾಥ ಪೂಜಾರಿ, ಬೋಗೇಶ ಸೋಲಾಪೂರ, ಮಲ್ಲಿಕಾರ್ಜುನ ಬಟಗಿ, ಪ್ರಭುಗೌಡ ಪಾಟೀಲ, ಲಕ್ಷö್ಮಣ ಹಂದ್ರಾಳ, ಸುರೇಶ ಬಿಜಾಪೂರ, ಭರತಕುಮಾರ ಎಚ್.ಟಿ., ಮಲ್ಲಿಕಾರ್ಜುನ ಎಸ್.ಟಿ., ಸಂಜು ಕಂಬಾಗಿ, ಸಿದ್ದಲಿಂಗ ಬಾಗೇವಾಡಿ, ಗಿರೀಶ ಕಲಘಟಗಿ, ಲಕ್ಷö್ಮಣ ಕಂಬಾಗಿ, ವಿ.ಎ. ಪಾಟೀಲ, ಚನ್ನು ಕಟ್ಟಿಮನಿ, ಬಾಳು ಜೇವೂರ, ಗೀತಾ ಎಚ್., ಸಿದ್ರಾಮ ಹಿರೇಮಠ, ಜಗದೀಶ ಸೂರ್ಯವಂಶಿ, ದಸ್ತಗೀರ ಉಕ್ಕಲಿ, ವಿದ್ಯಾವತಿ ಅಂಕಲಗಿ, ಗೀತಾ ಕಟ್ಟಿ, ಗೀತಾ ಪಾಟೀಲ, ಕಾಮಿನಿ ಕಸಬೆ, ಶೋಭಾ ವಾಲೀಕಾರ, ಶಿವಬಾಳಮ್ಮ ಕೊಂಡಗೂಳಿ, ಸೋಮು ರಣದೇವ ಹಾಗೂ ಅಖಂಡ ಕರ್ನಾಟಕ ರೈತ ಸಂಘಟನೆ ಮುಖಂಡರಾದ ಬಾಪುಗೌಡ ಲಿಂಗದಳ್ಳಿ, ವಿಠ್ಠಲ ಬಿರಾದಾರ, ಗುರುಲಿಂಗಪ್ಪ ಪಡಸಲಗಿ, ರಾಜೇಸಾಬ ವಾಲೀಕಾರ ಮುಂತಾದವರು ಭಾಗವಹಿಸಿದ್ದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
