Monday, September 18, 2023

ಜಿಲ್ಲೆಯಲ್ಲಿ ಮೂರನೇ ಶನಿವಾರ ನಡೆದ ಸಭೆಯಲ್ಲಿ 48,315 ಪಾಲಕರು ಭಾಗಿ ಅಂಗನವಾಡಿ ಕೇಂದ್ರಗಳ ಅಭಿವೃದ್ಧಿ ಹಾಗೂ ಮಕ್ಕಳ ಸೃಜನಾತ್ಮಕ -ಕ್ರಿಯಾತ್ಮಕ ಚಟುವಟಿಕೆ ತಿಳಿದುಕೊಳ್ಳಲು ಪಾಲಕರ ಸಭೆ ಯಶಸ್ವಿ : ಜಿಪಂ ಸಿಇಓ ರಾಹುಲ್ ಶಿಂಧೆ

 ಈ ದಿವಸ ವಾರ್ತೆ

ವಿಜಯಪುರ: ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಗ್ರಾಮ ಪಂಚಾಯತಿ ಮೂಲಕ  ಮಕ್ಕಳ ಸ್ನೇಹಿ ಚೇರ್ ಹಾಗೂ ಟೇಬಲ್ ದೊರಕಿಸಿಕೊಡುವ ಮೂಲಕ ಅಂಗನವಾಡಿ ಕೆಂದ್ರದಲ್ಲಿನ ದಾಖಲಾದ ಮಕ್ಕಳು ಓದಿನಲ್ಲಿ ಆಸಕ್ತಿ ತಾಳುವುದಷ್ಷೇ ಅಲ್ಲದೇ, ಉತ್ಸುಕತೆ, ಉಲ್ಲಾಸದಿಂದ ಅಂಗನವಾಡಿ ಕೇಂದ್ರಕ್ಕೆ ಬರಲು ಪ್ರೇರೇಪಣೆಯಾಗಿದೆ. 

ಇದೇ ಮೂರನೇ ಶನಿವಾರ ಪಾಲಕರ ಸಭೆಯಲ್ಲಿ ತಮ್ಮ  ಮಕ್ಕಳ ವಿವಿಧ ಸೃಜನಾತ್ಮಕ- ಕ್ರಿಯಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವುದನ್ನು ಪಾಲಕರು ತಿಳಿದುಕೊಳ್ಳಲು ಈ ಸಭೆ  ಅತ್ಯಂತ ಯಶಸ್ವಿಯಾಗಿದೆ ಎಂದು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ರಾಹುಲ್ ಶಿಂಧೆ ಹೇಳಿದ್ದಾರೆ. 

ಜಿಲ್ಲೆಯಲ್ಲಿನ 2,755 ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆ ನಡೆಸಲಾಯಿತು. ಈ ಸಭೆಯಲ್ಲಿ 48,315 ಕ್ಕೂ ಹೆಚ್ಚು ಪಾಲಕರು ಭಾಗವಹಿಸಿದ್ದರು. ಜಿಲ್ಲೆಯಾದ್ಯಂತ  ಇರುವ ಅಂಗನವಾಡಿ ಕೇಂದ್ರಗಳಲ್ಲಿ ಪ್ರತಿ ತಿಂಗಳ ಮೂರನೇ ಶನಿವಾರ ಪಾಲಕರ ಸಭೆ ಆಯೋಜಿಸಲಾಗುತ್ತಿದ್ದು, ಪಾಲಕರು ಭಾಗವಹಿಸಿ, ತಮ್ಮ ಮಕ್ಕಳ ಶೈಕ್ಷಣಿಕ, ಆಟೋಟ ಪ್ರಗತಿ ತಿಳಿದುಕೊಳ್ಳಬಹುದಾಗಿದೆ.

ಅಂಗನವಾಡಿಯಲ್ಲಿ ದೊರೆಯುವ ಪೌಷ್ಟಿಕ ಆಹಾರದಿಂದ ಮಕ್ಕಳು ದೈಹಿಕ ಹಾಗೂ ಬೌದ್ಧಿಕವಾಗಿ ಸದೃಢರಾಗುವಲ್ಲಿಯೂ ಯಶ ಕಾಣಲಾಗುತ್ತಿದೆ.

0-6 ವರ್ಷದ ವಯೋಮಾನದ ಮಕ್ಕಳ ಆರೋಗ್ಯ ತಪಾಸಣೆ, ಮಕ್ಕಳ ಪೌಷ್ಠಿಕ ಮಟ್ಟ ಹೆಚ್ಚಿಸಲು ಹಾಲು, ಮೊಟ್ಟೆ ಹಾಗೂ ಮೊಳಕೆ ಕಾಳು ವಿತರಣೆ ಹಾಗೂ ಕೇಂದ್ರಗಳಿಗೆ ನಿಯಮಿತವಾಗಿ ಆಹಾರ ಸಾಮಗ್ರಿ ಪೂರೈಕೆ, ಮಗುವಿನ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಲು ಐಸಿಡಿಎಸ್ ಮಿಷನ್ ಮೂಲಕ ಮಕ್ಕಳಿಗೆ ಅನೌಪಚಾರಿಕ ಶಿಕ್ಷಣದಡಿ ದಿನಬಳಕೆ ಸ್ಥಳೀಯ ಸಾಮಗ್ರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸಿ ಅಂಗನವಾಡಿ ಕೇಂದ್ರವನ್ನು ಮಕ್ಕಳ ಕಲಿಕಾ ಸ್ನೇಹಿ ಕೇಂದ್ರವಾಗಿರುವ ಬಗ್ಗೆ ತಿಳಿಸಲಾಯಿತು.ಶಾಲಾ ಪೂರ್ವ ಶಿಕ್ಷಣದ ಚಟುವಟಿಕೆಗಳನ್ನು ಕೇಂದ್ರಗಳಲ್ಲಿ ಏರ್ಪಡಿಸುತ್ತಿರುವ ಹಾಗೂ ಅದರಲ್ಲಿ ಮಕ್ಕಳು ಭಾಗವಹಿಸುವಿಕೆ ಕುರಿತು ಮಕ್ಕಳಿಂದ ಅಭಿನಯ ಗೀತೆ, ಕಥೆ ಹೇಳಿಸುವ ಪ್ರಾತ್ಯಕ್ಷಿಕೆ ನೋಡಿ ಪಾಲಕರು ಅಭಿಮಾನ ಪಟ್ಟು ಸಂಭ್ರಮಿಸಿದರು. ಮಕ್ಕಳು ಅನಾರೋಗ್ಯಕ್ಕೆ ಒಳಗಾಗುವುದನ್ನು ತಪ್ಪಿಸಲು ನಿಗದಿಯಂತೆ  ಚುಚ್ಚುಮದ್ದುಗಳನ್ನು ನೀಡಲು ಅರಿವು ಮೂಡಿಸಲಾಯಿತು.  ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿವಹಿಸುವಂತೆಯೂ ತಮ್ಮ ಮಕ್ಕಳ ಆರೋಗ್ಯ ಮತ್ತು ಪೌಷ್ಠಿಕತೆಯ ಅಗತ್ಯತೆ ಸರಿಯಾಗಿ ನೋಡಿಕೊಳ್ಳುವಂತೆಯೂ ತಾಯಂದಿರಿಗೆ ತಿಳಿಸಲಾಯಿತು.    

ಇಲಾಖೆಯ ಭಾಗ್ಯಲಕ್ಷ್ಮಿ, ಸುಕನ್ಯಾ ಸಮೃದ್ದಿ, ಪ್ರಧಾನಮಂತ್ರಿ ಮಾತೃವಂದನಾ ಹಾಗೂ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳುವಂತೆಯೂ,

ಅಂಗನವಾಡಿ ಕೇಂದ್ರಗಳ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ನೀಡಲು ದಾನಿಗಳನ್ನು ಗುರುತಿಸುವುದು ಹಾಗೂ ಶಾಲಾ ಆವರಣದಲ್ಲಿ ಕೊಠಡಿಗಳನ್ನು ಪಡೆಯಲು ಪಾಲಕರು ಸಹಭಾಗಿತ್ವದ ಮಹತ್ವ ತಿಳಿಸಲಾಯಿತು. ಕೇಂದ್ರಗಳಲ್ಲಿ ವಿದ್ಯುತ್, ಫ್ಯಾನ್, ಕುಡಿಯುವ ನೀರು, ಶೌಚಾಲಯ, ಕೈ ತೋಟ ಸೇರಿದಂತೆ ಮೂಲಭೂತ ಸೌಕರ್ಯಗಳ ಕಲ್ಪಿಸಿಕೊಡಲು ಪಾಲಕರಲ್ಲಿ ಮನವಿ ಮಾಡಲಾಯಿತು. ಮಾತೃಪೂರ್ಣ ಯೋಜನೆಯಡಿ ಗರ್ಭಿಣಿಯರು, ಬಾಣಂತಿಯರು ಕೇಂದ್ರಕ್ಕೆ ಆಗಮಿಸಿ, ಪೂರಕ ಪೌಷ್ಠಿಕ ಆಹಾರ ಪಡೆಯಲು ಫಲಾನುಭವಿಗಳನ್ನು ಪ್ರೇರೆಪಿಸುವಂತೆ ತಿಳಿಸಲಾಯಿತು. ಮಕ್ಕಳು ದಿನನಿತ್ಯ ಅಂಗನವಾಡಿಗೆ ಕಳುಹಿಸಬೇಕು.ಮಕ್ಕಳ ವೈಯಕ್ತಿಕ ಶುಚಿತ್ವಕ್ಕೆ ಗಮನ, ಶೌಚಾಲಯದ ಬಳಕೆಯ ಮಹತ್ವ, ಮಕ್ಕಳಲ್ಲಿ ಶಿಸ್ತು ರೂಢಿಸುವುದರ ಬಗ್ಗೆ ತಿಳಿಸಲಾಯಿತು. ಬಾಲ ವಿಕಾಸ ಸಮಿತಿ, ತಾಯಂದಿರ ಸಭೆ, ಮಕ್ಕಳ ಕಾವಲು ಸಮಿತಿ ಹಾಗೂ ಪೋಷಕರ ಸಭೆಯಲ್ಲಿ ತಾಯಿ-ತಂದೆ ಹಾಗೂ ಕುಟುಂಬದ ಸದಸ್ಯರು ಭಾಗವಹಿಸಿ ತಮ್ಮ ಸಹಭಾಗಿತ್ವ ಇರುವಂತೆ ನೋಡಿಕೊಳ್ಳಲೂ, ಗೃಹಲಕ್ಷ್ಮಿ ಯೋಜನೆಯಡಿ ಸೌಲಭ್ಯ ಪಡೆಯದಿರುವ ಯಜಮಾನಿ ಮಹಿಳೆಯರಿಗೆ  ಅಗತ್ಯ ದಾಖಲಾತಿಗಳನ್ನು ಸಿದ್ಧಪಡಿಸಿಟ್ಟುಕೊಳ್ಳಲು, ಸೆಪ್ಟೆಂಬರ್ ತಿಂಗಳನ್ನು ‘ಪೋಷಣ್ ಮಾಹೆ’ ಎಂದು ಆಚರಿಸುತ್ತಿರುವುದರಿಂದ ಎಲ್ಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ  ಪಾಲಕರಲ್ಲಿ ಕೋರಲಾಯಿತು.

*ಸಭೆಗೆ ಹಾಜರಾದ ಪಾಲಕರ ವಿವರ* : 

ವಿಜಯಪುರ ನಗರ ವಲಯದಲ್ಲಿ 351 ಅಂಗನವಾಡಿ ಕೇಂದ್ರಗಳಿದ್ದು, 15,874 ಮಕ್ಕಳು ಈ ಕೇಂದ್ರದಲ್ಲಿ ದಾಖಲಾಗಿದ್ದಾರೆ. 9,400 ಪಾಲಕರು, ವಿಜಯಪುರ ಗ್ರಾಮೀಣ ವಲಯದಲ್ಲಿನ  400 ಅಂಗನವಾಡಿ ಕೇಂದ್ರಗಳಲ್ಲಿ 18,256 ದಾಖಲಾತಿ ಇದ್ದು, 10,865 ಪಾಲಕರು, ಸಿಂದಗಿ ವಲಯದಲ್ಲ 486 ಅಂಗನವಾಡಿ ಕೇಂದ್ರಗಳಲ್ಲಿ ದಾಖಲಾದ ಮಕ್ಕಳ ಸಂಖ್ಯೆ38,432 ಇದ್ದು, 5,400 ಪಾಲಕರು ಭಾಗವಹಿಸಿದ್ದರು. ಚಡಚಣ ವಲಯದಲ್ಲಿ 198 ಅಂಗನವಾಡಿ ಕೇಂದ್ರಗಳಲ್ಲಿ 21,509 ಮಕ್ಕಳು ದಾಖಲಾಗಿದ್ದು, 3,200 ಪಾಲಕರು, ಮುದ್ದೇಬಿಹಾಳ ವಲಯದಲ್ಲಿ  458 ಅಂಗನವಾಡಿ ಪೈಕಿ, 33,065 ದಾಖಲಾಗಿದ್ದು,6450 ಪಾಲಕರು, ಇಂಡಿ ವಲಯದ 406 ಅಂಗನವಾಡಿ ಕೇಂದ್ರಗಳಲ್ಲಿ 37,455 ಮಕ್ಕಳ ದಾಖಲಾತಿ ಇದ್ದು, 5,735 ಪಾಲಕರು ಹಾಗೂ ಬಸವನ ಬಾಗೇಡಿ ವಲಯದ 456 ಅಂಗನವಾಡಿಯಲ್ಲಿ 37,384 ಮಕ್ಕಳ ದಾಖಲಾತಿ ಇರುವ ಈ ಅಂಗನವಾಡಿ ಕೇಂದ್ರಗಳಲ್ಲಿ 7,265 ಪಾಲಕರು ಸೇರಿದಂತೆ,  ಒಟ್ಟಾರೆ ಜಿಲ್ಲೆಯ 2,755 ಅಂಗನವಾಡಿ ಕೇಂದ್ರಗಳಲ್ಲಿ ನಡೆದ ಸಭೆಯಲ್ಲಿ 48,315 ಪಾಲಕರು ಭಾಗವಹಿಸಿದ್ದರು ಎಂದು ರಾಹುಲ್ ಶಿಂಧೆ ತಿಳಿಸಿದ್ದಾರೆ. 

ಮುಂಬರುವ ಪಾಲಕರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕರು ಹಾಗೂ ಗ್ರಾಮಸ್ಥರು ಭಾಗವಹಿಸಿ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವದ ಬೆಳವಣಿಗೆಗೆ ಸಹಕರಿಸಬೇಕು. ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಇರುವ ಪಾಠೋಪಕರಣ ಹಾಗೂ ಪೀಠೋಪಕರಣ, ಮೂಲಭೂತ ಸೌಲಭ್ಯ ಕಲ್ಪಿಸಿಕೊಡುವ ಮೂಲಕ ತಮ್ಮೂರಿನ ಎಳೆಯ ಮಕ್ಕಳ ಶೈಕ್ಷಣಿಕ ಗುಣಮಟ್ಟ ಹೆಚ್ಚಿಸುವ ಈ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು  ಕೋರಲಾಯಿತು.

ಉಪ ನಿರ್ದೇಶಕರು ಹಾಗೂ ಪ್ರತಿ ತಾಲೂಕಿನ ಶಿಶು ಅಭಿವೃದ್ದಿ ಯೋಜನಾಧಿಕಾರಿಗಳು ಅಂಗನವಾಡಿ  ಪಾಲಕರ ಸಭೆಯಲ್ಲಿ ಪಾಲ್ಗೊಂಡಿದ್ದರು.  

*ಸಭೆಯಲ್ಲಿ ಪಾಲ್ಗೊಂಡಿದ್ದ  ಪಾಲಕರ-ಪೋಷಕರ ಅಭಿಪ್ರಾಯಗಳು*:

ಅಂಗನವಾಡಿ ಕೇಂದ್ರಗಳಲ್ಲಿ ಪಾಲಕರ ಸಭೆಯನ್ನು ಕರೆದಿರುವುದರಿಂದ ಸಂತಸ ತಂದಿದೆ.ಅಂಗನವಾಡಿಯಲ್ಲಿ ಮಕ್ಕಳ ಶಾಲಾ ಪೂರ್ವ ಶಿಕ್ಷಣವನ್ನು ಗಮನಿಸಲು ಸಹಾಯಕವಾಗಿದೆ. ಮಕ್ಕಳಲ್ಲಿ ಶೈಕ್ಷಣಿಕ ಪ್ರಗತಿ ಹಂತ-ಹಂತವಾಗಿ ಕಾಣಬಹುದಾಗಿದೆ. ಮಕ್ಕಳಲ್ಲಿ ಸೂಪ್ತವಾಗಿ ಹುದುಗಿರುವ ವಿವಿಧ ಕೌಶಲ್ಯ- ಸೃಜನಾತ್ಮಕತೆ  ಅವರ ಭಾಗವಹಿಸುವಿಕೆಯಿಂದ ತಿಳಿದುಕೊಳ್ಳಬಹುದಾಗಿದೆ. ಕುಂಠಿತ ಬೆಳವಣಿಗೆಯಿರುವ ಮಕ್ಕಳ ಬಗ್ಗೆ ಮುಂಜಾಗ್ರತಾ ಕ್ರಮಗಳು ಹಾಗೂ ಇಲಾಖೆಯಿಂದ ಇರುವ ಸೌಲಭ್ಯಗಳ ಬಗ್ಗೆ ತಿಳಿಯಲು ಸಹಾಯಕವಾಗುವುದು.  ಕೇಂದ್ರಗಳ ಉನ್ನತೀಕರಣದ ಬಗ್ಗೆ ಚರ್ಚಿಸಲು ಸಹಾಯಕವಾಗಿದೆ. ಅಂಗನವಾಡಿ ಕೇಂದ್ರದಲ್ಲಿ ಪಾಲಕರ ಪಾಲ್ಗೊಳ್ಳುವಿಕೆ ಹೆಚ್ಚಾಗಿದೆ.  ಮಕ್ಕಳ ಮುಂದಿನ ಶಾಲಾ ಜೀವನದ ನಿಯಮಗಳನ್ನು ಅಂಗನವಾಡಿ ಕೇಂದ್ರದಲ್ಲಿ ಬುನಾದಿಯಾಗಿ ಪರಿವರ್ತಿಸಿಕೊಳ್ಳಲು ಸಹಾಯಕವಾಗಿದೆ. ಕೇಂದ್ರದ ಎಲ್ಲ ಚಟುವಟಿಕೆ, ಬೆಳವಣಿಗೆಯ ಪರಿಶೀಲನೆ ಹಾಗೂ ಮೇಲ್ವಿಚಾರಣೆ ಮಾಡಲು ಪಾಲಕರ ಸಭೆ ಒಂದು ವೇದಿಕೆಯಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ ಪಾಲಕರ ಅನಿಸಿಕೆ ಹಂಚಿಕೊಂಡರು  ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಕೆ.ಕೆ.ಚವ್ಹಾಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.