Saturday, January 8, 2022

09-01-2022 EE DIVASA KANNADA DAILY NEWS PAPER

110 ಕೆವ್ಹಿ ಮಮದಾಪೂರ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಈ ದಿವಸ ವಾರ್ತೆ

ವಿಜಯಪುರ : ಜಿಲ್ಲೆಯ 110 ಕೆವ್ಹಿ ಮಮದಾಪುರ ಹಾಗೂ ಅದರ ಕೆಳಗೆ ಬರುವ ವಿದ್ಯುತ್ ಉಪ ಕೇಂದ್ರಗಳ ಮೇಲೆ ಕೆ.ಪಿ.ಟಿ.ಸಿ.ಎಲ್ ವಿಜಯಪುರ ವಿಭಾಗದ ವತಿಯಿಂದ ತ್ರೈಮಾಸಿಕ ನಿರ್ವಹಣೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಪ್ರಯುಕ್ತ ಜನವರಿ 10 ರಂದು ಈ ಉಪಕೇಂದ್ರಗಳಿಂದ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ವಿಜಯಪುರ ಹೆಸ್ಕಾಂ, ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ತಿಳಿಸಿದ್ದಾರೆ.

ಅದರಂತೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗುವ ಉಪಕೇಂದ್ರಗಳು ಈ ಕೆಳಗಿನಂತಿವೆ. 110 ಕೆವಿ ಮಮದಾಪೂರ, 110 ಕೆವಿ ಶಿರಬೂರ, 110 ಕೆವಿ ಬಬಲೇಶ್ವರ, 110 ಕೆವಿ ಕಂಬಾಗಿ ಮತ್ತು 33 ಕೆವಿ ಲಿಂಗದಳ್ಳಿ ಎಲ್‍ಐಎಸ್ ಹಾಗೂ 33 ಕೆ ವಿ ದೇವರ ಗೆಣ್ಣೂರ ಆಗಿರುತ್ತವೆ. ಆದ್ದರಿಂದ ವಿದ್ಯುತ್ ಗ್ರಾಹಕರು ಹೆಸ್ಕಾಂ ಜೊತೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್ ಮೂರನೇ ಅಲೆಯ ಸಮರ್ಪಕ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಸಕಲ ರೀತಿಯ ಅಗತ್ಯ ಕ್ರಮಕೈಗೊಳ್ಳಿ -ಜಿಲ್ಲಾಧಿಕಾರಿ ಪಿ.ಸುನೀಲಕುಮಾರ್

 


ಈ ದಿವಸ ‌ವಾರ್ತೆ ವಿಜಯಪುರ : ಕೋವಿಡ್ ಮೂರನೇ ಅಲೆಯ ಸಮರ್ಪಕ ನಿಯಂತ್ರಣಕ್ಕಾಗಿ ಸಮರೋಪಾದಿಯಲ್ಲಿ ಸಕಲ ರೀತಿಯ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಸುನೀಲಕುಮಾರ ಅವರು ಹೇಳಿದರು.

ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಸಂವಾದ ಸಭಾಂಗಣದಲ್ಲಿಂದು ಸಭೆ ನಡೆಸಿದ ಮಾತನಾಡಿದ ಅವರು  ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಕೋವಿಡ್ ರೋಗಿಗಳಿಗೆ ಸರಿಯಾದ ಸಮಯಕ್ಕೆ ಆಸ್ಪತ್ರೆಗಳಲ್ಲಿ ಬೆಡ್ ದೊರೆಯುವಂತೆ ವ್ಯವಸ್ಥೆ ಮಾಡಿಟ್ಟುಕೊಳ್ಳಬೇಕು. ಬೆಡ್‍ಗಳಿಗಾಗಿ ರೋಗಿಗಳು ಅನಗತ್ಯವಾಗಿ ಪರದಾಡುವಂತಾಗಬಾರದು. ಈ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಕೆಪಿಎಮ್ ನಲ್ಲಿ ರಜಿಸ್ಟರ್ ಆದ ಬೆಡ್‍ಗಳ ಬಗ್ಗೆ ಗಮನ ಹರಿಸಿ, ಪೂರೈಸಲಾದ ಬೆಡ್‍ಗಳನ್ನು ಗುರುತಿಸಿ ಅವುಗಳ ಸಂಪೂರ್ಣ ಪಟ್ಟಿಮಾಡಿಟ್ಟುಕೊಳ್ಳಿ. ಇದರಿಂದ ತುರ್ತು ಪರಿಸ್ಥಿತಿಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುತ್ತದಲ್ಲದೇ, ರೋಗಿಗಳಿಗೂ ಅನಗತ್ಯ ಗೊಂದಲ ಉಂಟಾಗುವುದಿಲ್ಲ. ಬೆಡ್ ಮ್ಯಾನೇಜ್‍ಮೆಂಟ್‍ನಲ್ಲಿ ಯಾವುದೇ ಲೋಪ ಹಾಗೂ ಸಮಸ್ಯೆಗಳಾಗದಂತೆ ಕ್ರಮಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‍ಗಳ ಸೂಕ್ತ ನಿರ್ವಹಣೆಯೊಂದಿಗೆ ಆಕ್ಸಿಜನ್, ವೆಂಟಿಲೇಟರ್‍ಗಳಂತಹ ಅಗತ್ಯ ವ್ಯವಸ್ಥೆಯನ್ನೂ ಮಾಡಿಟ್ಟುಕೊಂಡಿರಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ತಾಲೂಕುವಾರು ಐಎಲ್‍ಐ, ಸಾರಿ ಸರ್ವೇ ಕಾರ್ಯಕೈಗೊಂಡು ಈ ಬಗ್ಗೆ ಕೋವಿಡ್ ಪೋರ್ಟಲ್‍ನಲ್ಲಿ ಅಪ್‍ಡೇಟ್ ಮಾಡಬೇಕು. ಸ್ವ್ಯಾಬ್ ಸಂಗ್ರಹಿಸುವಾಗಲೇ ವ್ಯಕ್ತಿಯ ಪ್ರಾಥಮಿಕ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಒಂದು ವೇಳೆ ವ್ಯಕ್ತಿಯಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದರೆ ಅಂತಹವರ ಸಂಪೂರ್ಣ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ತಾಲೂಕಾ ಹಂತದಲ್ಲಿ ತಹಶೀಲ್ದಾರರು ಹಾಗೂ ಇಒ ಗಳು ಇನ್ನಷ್ಟು ಜಾಗರೂಕತೆಯಿಂದ ಕಾರ್ಯನಿರ್ವಹಿಸಬೇಕಿದ್ದು, ರೋಗಿಗಳನ್ನು ತಾಲೂಕಾಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಕಳುಹಿಸುವಾಗ ಬಹಳ ಗಮನ ಹಾಗೂ ಎಚ್ಚರಿಕೆ ವಹಿಸಿ, ಗಂಭೀರ ಹಾಗೂ ಅಗತ್ಯವೆನಿಸಿದರೆ ಮಾತ್ರ ಕಳುಹಿಸಿಕೊಡಬೇಕು. ಸಾಧ್ಯವಾದರೆ ತಾಲೂಕಾಸ್ಪತ್ರೆಯಲ್ಲಿಯೇ ಅಲ್ಲಿನ ರೋಗಿಗಳನ್ನು ಚಿಕಿತ್ಸೆಗೊಳಪಡಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಕೋವಿಡ್ ಪಾಸಿಟಿವ್ ವರದಿ ಬಂದ ಪ್ರತಿ ರೋಗಿಯ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸಿಟ್ಟುಕೊಳ್ಳಬೇಕು. ಅಂತಹ ವ್ಯಕ್ತಿಗಳ ಪ್ರಾಥಮಿಕ ಸಂಪರ್ಕದ ಬಗ್ಗೆಯೂ ಮಾಹಿತಿ ಕಲೆ ಹಾಕಬೇಕು. ಹಾಗೆಯೇ ಕೂಡಲೇ ಅವರಿಗೆ ಅಗತ್ಯ ಚಿಕಿತ್ಸೆ ಒದಗಿಸಬೇಕು. ಈ ಬಗ್ಗೆ ಪೋರ್ಟಲ್‍ನಲ್ಲೂ ವಿವರ ದಾಖಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಸ್ವ್ಯಾಬ್ ಸಂಗ್ರಹಿಸುವಾಗ ವ್ಯಕ್ತಿಯ ವಿಳಾಸ ಹಾಗೂ ದೂರವಾಣಿ ಸಂಪರ್ಕ ಸಂಖ್ಯೆಯನ್ನು ಕಡ್ಡಾಯವಾಗಿ ತೆಗೆದುಕೊಳ್ಳಬೇಕು. ಈ ವಿಷಯದಲ್ಲಿ ಲ್ಯಾಬ್ ಟೆಕ್ನಿಶಿಯೆನ್‍ಗಳು ಬಹಳ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ಅಳವಡಿಸಲು ಕೂಡಲೇ ಕ್ರಮಕೈಗೊಳ್ಳಿ, ಹಾಗೆಯೇ ಸರ್ಕಾರದಿಂದ ಮಂಜೂರಾದ ಚಿಕ್ಕಮಕ್ಕಳ ಆಸ್ಪತ್ರೆಗಳ ನಿರ್ಮಾಣ ಹಾಗೂ ಅದರ ಸೂಕ್ತ ನಿರ್ವಹಣೆ ಕಾರ್ಯಕ್ಕೂ ಕ್ರಮಕೈಗೊಳ್ಳಿ, ಇದರಲ್ಲಿ ಯಾವುದೇ ವಿಳಂಬ ಮಾಡಬಾರದು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಹೋಮ್ ಐಸೋಲೇಶನ್ ರೋಗಿಗಳಿಗೆ ಕಾಲಕಾಲಕ್ಕೆ ಸೂಕ್ತ ಚಿಕಿತ್ಸೆ ಒದಗಿಸುವುದರ ಜೊತೆಗೆ ಅಗತ್ಯವಿದ್ದಲ್ಲಿ ಸಕಾಲಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲು ಸೂಕ್ತ ಕ್ರಮಕೈಗೊಳ್ಳಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಪಿಎಮ್ ಕೇರ್, ರಾಜ್ಯ ಸರ್ಕಾರ ಹಾಗೂ ಇನ್ನಿತರ ಎನ್ ಜಿ ಒ ಹಾಗೂ ದಾನಿಗಳಿಂದ ಒದಗಿಸಲಾದ ಆಕ್ಸಿಜನ್ ಕಾನ್ಸಟ್ರೇಟರ್‍ಗಳನ್ನು ಆದ್ಯತೆ ಮೇಲೆ ಒದಗಿಸಲು ಕ್ರಮಕೈಗೊಳ್ಳಿ. ಆದಷ್ಟು ಜನರೇಟರ್ ಹಾಗೂ ಪವರ್ ಬ್ಯಾಕ್‍ಅಪ್ ಸೌಲಭ್ಯವಿದ್ದ ಕಡೆಗಳಲ್ಲಿ ಆಕ್ಸಿಜನ್ ಕಾನ್ಸಟ್ರೇಟರ್‍ಗಳನ್ನು ಒದಗಿಸುವುದು ಹೆಚ್ಚು ಸೂಕ್ತವಾಗಿರುತ್ತದೆ ಎಂದು ಅವರು ಸಲಹೆ ನೀಡಿದರು.

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಆಕ್ಸಿಜನ್ ಪ್ಲಾಂಟ್‍ಗಳ ಸರಿಯಾದ ಮಾಹಿತಿಯನ್ನೋದಗಿಸಿ, ಅವುಗಳ ನಿರ್ವಹಣೆಯಲ್ಲಿ ಯಾವುದೇ ತಾಂತ್ರಿಕ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚಿಸಿದರು.

ಇಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳನ್ನು ಬದಲಾವಣೆ ಮಾಡಬಾರದು. ಒಂದು ವೇಳೆ ಯಾರನ್ನಾದರೂ ಬದಲಾಯಿಸುವ ಸನ್ನಿವೇಶ ಉಂಟಾದರೆ ಅದನ್ನು ತಮ್ಮ ಹಾಗೂ ಟಿಎಚ್‍ಒ ಗಳ ಗಮನಕ್ಕೆ ತಂದು, ಸೂಕ್ತ ಸಲಹೆಯ ಮೇರೆಗೆ ಮುಂದಿನ ಕ್ರಮಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಜಿಲ್ಲೆಯ ಗಡಿಭಾಗಗಳ ಚೆಕ್‍ಪೋಸ್ಟ್‍ಗಳಲ್ಲಿ ಟೆಸ್ಟಿಂಗ್ ಕಾರ್ಯವನ್ನು ಅತ್ಯಂತ ಸಮರ್ಪಕವಾಗಿ ಕೈಗೊಳ್ಳಬೇಕು. ಪ್ರಯಾಣಿಕರ ಆರ್‍ಟಿಪಿಸಿಆರ್ ನೆಗೆಟಿವ್ ಟೆಸ್ಟ್ ವರದಿಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಅಲ್ಲಿ ಕೋವಿಡ್ ಲಕ್ಷಣಗಳು ಕಂಡುಬಂದ ವ್ಯಕ್ತಿಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಚಹಾ ಅಂಗಡಿ, ಬೇಕರಿಗಳಂತಹ ಆಹಾರ, ದಿನಸಿ ಮಾರಾಟದ ಅಂಗಡಿಗಳ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಜಮಾ ಆಗದಂತೆ ಎಚ್ಚರಿಕೆ ವಹಿಸಬೇಕು. ಪಾರ್ಸಲ್ ವ್ಯವಸ್ಥೆಗೆ ಅವಕಾಶ ಕಲ್ಪಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಹಾಗೆಯೇ ಗಡಿಭಾಗಗಳ ಚೆಕ್‍ಪೋಸ್ಟ್‍ಗಳಲ್ಲಿ ಜನರಿಗೆ ತೊಂದರೆಯಾಗದ ಹಾಗೂ ಜಾಗೃತಿಯನ್ನುಂಟು ಮಾಡುವ ರೀತಿಯಲ್ಲಿ, ಇನ್ನಷ್ಟು ಕಟ್ಟುನಿಟ್ಟಿನ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.


  ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಉಪವಿಭಾಗಾಧಿಕಾರಿಗಳಾದ ರಾಹುಲ್ ಸಿಂಧೆ, ಬಲರಾಮ ಲಮಾಣಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಮ ಅರಸಿದ್ಧಿ, ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಜಕುಮಾರ ಯರಗಲ್, ಮಹೇಶ ನಾಗರಬೆಟ್ಟ, ಡಬ್ಲ್ಯೂ ಎಚ್ ಒ ಪ್ರತಿನಿಧಿ ಮುಕುಂದ ಗಲಗಲಿ ಸೇರಿದಂತೆ ವಿವಿಧ ತಾಲೂಕುಗಳ ತಹಶೀಲ್ದಾರರು ಹಾಗೂ ಆರೋಗ್ಯ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.