Monday, November 20, 2023

21-11-2023 EE DIVASA KANNADA DAILY NEWS PAPER

ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿಡುವ ಠೇವಣಿ ಹಣವನ್ನು ಸಹಕಾರಿ ಬ್ಯಾಂಕುಗಳಲ್ಲಿಯೇ ತೊಡಗಿಸುವ ಬಗ್ಗೆ ಪರಿಶೀಲನೆ :ಮುಖ್ಯಮಂತ್ರಿ ಸಿದ್ದರಾಮಯ್ಯ


ಈ ದಿವಸ ವಾರ್ತೆ

ವಿಜಯಪುರ, ನವೆಂಬರ್ 20 : ಸರ್ಕಾರ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಇಡುವ ಠೇವಣಿ ಹಣವನ್ನು ಸಹಕಾರಿ  ಬ್ಯಾಂಕುಗಳಲ್ಲಿಯೇ  ತೊಡಗಿಸುವ ಬಗ್ಗೆ ಪರಿಶೀಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಅಖಿಲ ಬಾರತ ಸಹಕಾರಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.


ಸಹಕಾರಿ  ಬ್ಯಾಂಕುಗಳು ಸುಸ್ಥಿರವಾಗಿರಬೇಕು. ಸುಸ್ಥಿರವಾಗಿದ್ದರೇ ಮಾತ್ರ ಅವು ರೈತರಿಗೆ ಸಾಲ ನೀಡಲು ಸಾಧ್ಯ. ರೈತರಿಗೆ ವ್ಯವಸಾಯ ಮಾಡಲು ಸಕಾಲದಲ್ಲಿ ಸಾಲ ಸಿಕ್ಕರೆ ವ್ಯವಸಾಯ ಮಾಡಲು ಅನುಕೂಲವಾಗಿ ಉತ್ಪಾದನೆಯೂ ಹೆಚ್ಚಾಗಲಿದೆ ಎಂದರು. ಸರ್ಕಾರ ಒಂದು ವರ್ಷಕ್ಕೆ 1200 ಕೋಟಿ ರೂ.ಗಳನ್ನು ಹಾಲು ನೀಡು ಕ್ಷೀರ ಭಾಗ್ಯ ಕಾರ್ಯಕ್ರಮಕ್ಕೆ ಖರ್ಚು ಮಾಡುತ್ತಿದೆ. ಹಿಂದೆ  ಮುಖ್ಯಮಂತ್ರಿಯಾಗಿದ್ದಾಗ ಸಹಕಾರ ಸಂಘಗಳಲ್ಲಿ ರೈತರು ಪಡೆದ ಸಾಲವನ್ನು ಮನ್ನಾ ಮಾಡಲು 50 ಸಾವಿರದವರಗೆ ಸಂಪೂರ್ಣ ಮನ್ನಾ  ಮಾಡಲಾಯಿತು. ಹೀಗೆ ಮನ್ನಾ ಮಾಡದ್ದರಿಂದ ಸಹಕಾರಿ ಸಂಘಗಳು ಹಾಗೂ ಸಹಕಾರ  ಬ್ಯಾಂಕುಗಳಿಗೆ ಶಕ್ತಿ ಬರಲು ಸಾಧ್ಯವಾಯಿತು ಎಂದರು.

ರೈತರಿಗೆ ಸಾಲ ನೀಡಲು  ನಬಾರ್ಡ್ ಹಾಗೂ ಪ್ರಧಾನಮಂತ್ರಿಗಳಿಗೆ ನವರಿಗೆ ಕೂಡಲೇ ಪತ್ರ

ನಮ್ಮ ಸರ್ಕಾರ ಬಜೆಟ್ ಮಂಡಿಸಿದಾಗ ಜೀರೋ ಪರ್ಸೆಂಟ್ ಸಾಲವನ್ನು 3 ರಿಂದ 5 ಲಕ್ಷದವರೆಗೆ ಏರಿಸುವ ಕೆಲಸ ಮಾಡಿದ್ದೇವೆ.  ರೈತರಿಗೆ ಸಾಲ ನೀಡಬೇಕೆಂದು ನಬಾರ್ಡ್ ಹಾಗೂ ಪ್ರಧಾನಮಂತ್ರಿಗಳಿಗೆ ನವರಿಗೆ ಕೂಡಲೇ ಪತ್ರ ಬರೆಯುವ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೇ 3 ಲಕ್ಷದವರೆಗೆ ಶೇ. 3 ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿತ್ತು. ಈಗ ಅದನ್ನು ಬಡ್ಡಿ ರಹಿತವಾಗಿ 3-5 ಲಕ್ಷದವರೆಗೆ ಸಾಲ ನೀಡುವ ಕೆಲಸ ಮಾಡಲಾಗಿದೆ. ಶೇ 3 ರಷ್ಟು  ಬಡ್ಡಿಯನ್ನು 15 ಲಕ್ಷ ಆಗುವವರೆಗೆ ಮಾತ್ರ ನೀಡಬೇಕು.

ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಮಾತ್ರ ಬ್ಯಾಂಕುಗಳು  ಲಾಭದಾಯಕವಾಗಿ ನಡೆಯುತ್ತವೆ

ಯಾವುದೇ  ಬ್ಯಾಂಕಿನಲ್ಲಿ ಎಲ್ಲರೂ ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಮಾತ್ರ ಅದು ಲಾಭದಾಯಕವಾಗಿ ನಡೆಯುತ್ತದೆ.  ಸ್ವಾರ್ಥ ಬಿಟ್ಟು ಸೇವೆ ಮಾಡುವ ಕ್ಷೇತ್ರವಿದು ಎಂದರು.  ಆ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯ ನಾಯಕತ್ವ ಬೆಳೆಸಿಕೊಳ್ಳುವ ಅವಕಾಶ ದೊರಯುತ್ತದೆ. ವಿಜಯಪುರ ಡಿಸಿಸಿ ಬ್ಯಾಂಕ್ ಪ್ರಾರಂಭವಾಗಿ 105 ವರ್ಷಗಳಾಗಿರುವ ಸ್ಮರಾಣಾರ್ಥ 15-16 ಕೋಟಿ ವೆಚ್ಚದಲ್ಲಿ ಹೊಸ ಕಟ್ಟಡ ಕಟ್ಟಿರುವುದರ ಅರ್ಥ ಬ್ಯಾಂಕು ಆರ್ಥಿಕವಾಗಿ ಸುಸ್ಥಿರವಾಗಿರುವುದರ ದ್ಯೋತಕ ಎಂದರು.  

ಸಹಕಾರಿ ತತ್ವದ ಮೇಲೆ ಜಾಗೃತಿ, ಸಮಾಜದಲ್ಲಿನ ಬಡ ಬಡತನ, ಅಸಮಾನತೆ ಹೋಗಲಾಡಿಸುವ ಪ್ರಯತ್ನ ಮಾಡಬೇಕು  ನಮ್ಮ ಸರ್ಕಾರ ಅಸಮಾನತೆ ತೊಲಗಿಸಲು ಅನೇಕ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಶಕ್ತಿ  ಯೋಜನೆಯಡಿ 1 ಕೋಟಿ ಮಹಿಳೆಯರು ಉಚಿತವಾಗಿ ಬಸ್ಸುಗಳಲ್ಲಿ ಪ್ರಯಾಣ ಮಾಡಿದ್ದಾರೆ. ಸಣ್ಣ ಪುಟ್ಟ ದೋಷಗಳ ಹೊರತಾಗಿಯೂ  ನೂರಕ್ಕೆ 90 ಭಾಗ ಬಡವರಿಗೆ, ಮಹಿಳೆಯರಿಗೆ, ದಲಿತರಿಗೆ, ಅಲ್ಪಸಂಖ್ಯಾತರಿಗೆ ಈ ಕಾರ್ಯಕ್ರಮ  ರೂಪಿಸಿ ಆರ್ಥಿಕ ಶಕ್ತಿಯನ್ನು ತುಂಬಲಾಗಿದೆ. ಸಹಕಾರ ಕ್ಷೇತ್ರ ಹೇಗೆ ಜಾತಿ ಧರ್ಮಗಳಿಂದ ಹೊರತಾಗಿದೆಯೋ ಅದೇ ರೀತಿ ನಮ್ಮ ಕಾರ್ಯಕ್ರಮಗಳು ಎಲ್ಲಾ ಜಾರಿ ಧರ್ಮಗಳ ಜನರಿಗೆ, ಮೇಲ್ವರ್ಗದ ಬಡವರಿಗೂ ಕಾರ್ಯಕ್ರಮಗಳನ್ನು ಕೊಟ್ಟಿದ್ದೇವೆ.

ಬರಗಾಲವನ್ನು ಸಮರ್ಥವಾಗಿ ನಿಭಾಯಿಸುತ್ತೇವೆ

12 ರಾಜ್ಯಗಳಲ್ಲಿ ಬರಗಾಲವಿದ್ದು, ಕರ್ನಾಟಕದಲ್ಲಿಯೂ ಕೂಡ 236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳಲ್ಲಿ ಬರ ಘೋಷಣೆ ಮಾಡಲಾಗಿದೆ. ಬರ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಬಿಡುಗಡೆ ಮಾಡಿಸುವ ಕೆಲಸವನ್ನು ನಮ್ಮ ಸಂಸದರು ಮಾಡಬೇಕು. ಕುಡಿಯುವ ನೀರಿಗೆ ಸಮಸ್ಯೆಯಾಗಬಾರದೆಂದ ಡಿಸಿ, ಸಿಇಒ ಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಿಗಳ ಬಳಿ 800 ಕೋಟಿ ರೂ.ಗಳು ಲಭ್ಯವಿದೆ. ಮೇವಿಗೆ, ಉದ್ಯೋಗ ನೀಡಲು, ಕುಡಿಯುವ ನೀರಿಗೆ ರಾಜ್ಯ ಸರ್ಕಾರ ಈಗಾಗಲೇ 800 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.  ಬರಗಾಲವನ್ನು ನಮ್ಮ ಸರ್ಕಾರ ಸಮರ್ಥವಾಗಿ ನಿಭಾಯಿಸುತ್ತದೆ ಎಂದು ಬರವಸೆ ನೀಡಿದರು.

ಸಹಕಾರಿ ರಂಗ ಜಾತಿ ಧರ್ಮರಹಿತ ಕ್ಷೇತ್ರ:

ಸ್ವಾತಂತ್ರ್ಯಪೂರ್ವದಿಂದಲೂ ಸಹಕಾರಿ ಕ್ಷೇತ್ರ ಬೆಳೆಯುತ್ತಾ ಬಂದಿದೆ. ಸಿದ್ದನಗೌಡ ಸಣ್ಣರಾಮನಗೌಡ ಪಾಟೀಲರು ಸಹಕಾರ ಸಂಘ ಪ್ರಾರಂಭಿಸಿದರು, ಇಂದು ರಾಜ್ಯದಲ್ಲಿ 45600 ಸಹಕಾರ ಸಂಘಗಳಿದ್ದು, ಭಾರತದಲ್ಲಿ ಸುಮಾರು 8.50 ಲಕ್ಷ ಸಹಕಾರ ಸಂಘಗಳಿದ್ದು, 31 ಕೋಟಿ ಸದಸ್ಯರಿದ್ದಾರೆ. ಸಹಕಾರಿ ಕ್ಷೇತ್ರದ ದೇಶದಾದ್ಯಂತ ವ್ಯಾಪಕವಾಗಿ ಬೆಳೆದಿರುವುದಕ್ಕೆ ಇದೇ ಸಾಕ್ಷಿ. ಈ ಬೆಳವಣಿಗೆ ದೇಶದ ಆರ್ಥಿಕ  ಹಾಗೂ ಸಾಮಾಜಿಕ ಬೆಳವಣಿಗೆಯನ್ನೂ ಬಿಂಬಿಸುತ್ತದೆ.  ಸಹಕಾರಿ ರಂಗ ಒಂದು ಕ್ಷೇತ್ರಕ್ಕೆ ಸೀಮಿತವಾಗಿಲ್ಲ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಬದುಕಿನ ಎಲ್ಲ ಕ್ಷೇತ್ರಗಳಲ್ಲಿ ಸಹಕಾರ ರಂಗ ವ್ಯಾಪಿಸಿಕೊಂಡಿದೆ.  ಸಹಕಾರಿ ರಂಗದ ಅಭಿವೃದ್ಧಿ , ರಾಜ್ಯ ಮತ್ತು ದೇಶದ ಜಿಡಿಪಿಯ ಬೆಳವಣಿಗೆಯ ಮೇಲೂ ಪರಿಣಾಮವನ್ನು ಬೀರುತ್ತದೆ. ದೇಶದ ಆಂತರಿಕ ಕೊಡುಗೆಯ ಹೆಚ್ಚಳದಲ್ಲಿ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರವಾಗಿದೆ. ದೇಶದಲ್ಲಿ ಅನೇಕ ಜಾತಿ ಧರ್ಮಗಳಿವೆ. ಆದರೆ ಸಹಕಾರಿ ರಂಗಕ್ಕೆ ಯಾವ ಜಾತಿ ಧರ್ಮಗಳ ಸೋಂಕು ಇಲ್ಲ.  ಜಾತಿ ರಹಿತವಾದ ಧರ್ಮರಹಿತವಾದ ಕ್ಷೇತ್ರವೆಂದರೆ ಸಹಕಾರಿ ಕ್ಷೇತ್ರ ಎಂದರು.

ದಲಿತರು, ಮಹಿಳೆಯರು ಸಹಕಾರಿ ಸದಸ್ಯರಾಗಲು ಪ್ರೋತ್ಸಾಹ:

ನಾನು ಹಿಂದೆ ಮುಖ್ಯಮಂತ್ರಿಯಾಗಿದ್ದಾಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಮಹಿಳೆಯರನ್ನು ಸಹಕಾರ ಸಂಘದ ಸದಸ್ಯರಾಗಲು ಸರ್ಕಾರವೇ ಜನರ ಪರವಾಗಿ ಶೇರು ಮೊತ್ತವನ್ನು ಭರಿಸಲಾಗಿತ್ತು. ಈ ಕಾರ್ಯಕ್ರಮ ಇಂದಿಗೂ ಮುಂದುವರೆಯುತ್ತಿದೆ. ಎಲ್ಲ ದಲಿತರು ಹಾಗೂ ಮಹಿಳೆಯರು ಸಹಕಾರ ಸಂಘದ ಸದಸ್ಯರಾಗಬೇಕು. ಸರ್ಕಾರದ ಸಹಾಯದಿಂದಾಗಿ ದಲಿತರು ಹಾಗೂ ಮಹಿಳೆಯರು ಹಾಲು ಸಹಕಾರ ಸಂಘದಲ್ಲಿ ಸದಸ್ಯರಾಗುತ್ತಿದ್ದಾರೆ. ನಮ್ಮ ಸರ್ಕಾರ ಹಾಲಿನ ಪ್ರತಿ ಲೀ.ಗೆ ರೂ. 5 ಗಳ ಪ್ರೋತ್ಸಾಹಧನ ನೀಡಲಾಗುತ್ತಿದೆ. ಈಗ ಪ್ರೋತ್ಸಾಹ ಧನವನ್ನು ಪ್ರತಿ ಲೀ.ಗೆ 5 ರೂ. ನಿಂದ ಹಿಡಿದು 8 ರೂ.ಗೆ ಹೆಚ್ಚಳ ಮಾಡಿ ನೀಡಲಾಗುತ್ತಿದ್ದು, ಈ ಮೊತ್ತ ರೈತರಿಗೆ ನೇರವಾಗಿ ತಲುಪುತ್ತಿದೆ ಎಂದರು.

ಹಾಲು ಉತ್ಪಾದಕರ ಸಹಕಾರ ಸಂಘದವರು ಹಾಲು ಉತ್ಪಾದನೆ ಜಾಸ್ತಿಯಾಗಿದ್ದು, ಸರ್ಕಾರ ಈ ನಿಟ್ಟಿನಲ್ಲಿ ಸಹಾಯ ಮಾಡಬೇಕೆಂಬ ಬೇಡಿಕೆಯನ್ನು ಸಲ್ಲಿಸಿತ್ತು. ಆದ್ದರಿಂದ ಶಾಲಾ ಮಕ್ಕಳಿಗೆ ಉಚಿತವಾಗಿ ಹಾಲು ನೀಡುವ ಯೋಜನೆಯನ್ನು ಹಮ್ಮಿಕೊಂಡು , ಹಾಲು ಉತ್ಪಾದಕರ ಸಮಸ್ಯೆ ಬಗೆಹರಿಸುವ ಜೊತೆಗೆ ಮಕ್ಕಳ ಪೌಷ್ಟಿಕತೆ ಹೆಚ್ಚಳಕ್ಕೂ ಅನುಕೂಲ ಕಲ್ಪಿಸಲಾಯಿತು ಎಂದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:

ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.

ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಪಡಿಸಲಾಗುವುದು