Saturday, October 2, 2021

03-10-2021 EE DIVASA KANNADA DAILY NEWS PAPER

ಅಸ್ಪೃಶ್ಯತೆ ಪದ್ಧತಿ ಸಮಾಜಕ್ಕೆ ಅಂಟಿದ ಶಾಪ





 ಈ ದಿವಸ ವಾರ್ತೆ

ವಿಜಯಪುರ: ಭಾರತರತ್ನ ಡಾ|| ಬಿ.ಆರ್.ಅಂಬೇಡ್ಕರ್ ರವರ ಮಹತ್ತರವಾದ ಕನಸಿನಂತೆ, “ಎಲ್ಲರೂ ಸಮಾನರು, ಎಲ್ಲರಿಗೂ ಸಮಾನ ಹಕ್ಕು” ಎನ್ನುವ ಭಾರತದ ಸಂವಿಧಾನದ ಆಶಯದಂತೆ, ಸಾಮಾಜಿಕ ಹಾಗೂ ಆರ್ಥಿಕ ಸಮಾನತೆಯ ಭದ್ರ ಭಾರತ ದೇಶ ಆಗಬೇಕಾದರೆ ಜಾತಿಭೇದ, ಜಾತಿವೈಷಮ್ಯ ಇಲ್ಲದಂತಾಗಬೇಕು. ಅಸ್ಪೃಶ್ಯತೆ ಎನ್ನುವುದು ನಮ್ಮ ಸಮಾಜಕ್ಕೆ ಅಂಟಿದ ಶಾಪ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಶ್ರೀ.ರಾಮನಗೌಡ ಕನ್ನೊಳಿ ಅವರು ಹೇಳಿದರು.

ನಗರದ ತೋರವಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜಿಲ್ಲಾ ಪಂಚಾಯತ ವಿಜಯಪುರ, ತಾಲೂಕ ಪಂಚಾಯತ, ತಿಕೋಟಾ ಗ್ರಾಮ ಪಂಚಾಯತ ಕಾರ್ಯಾಲಯ, ತೊರವಿ,

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಅಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ “ಸ್ವಚ್ಛತಾ ಹಿ ಸೇವಾ” ಕಾರ್ಯಕ್ರಮದಲ್ಲಿ ಮಾತನಾಡಿದರು

 “ಮಾನವ ಕುಲಂ ತಾನೊಂದೆ ವಲಂ' ಎನ್ನುವ ಆದಿಕವಿ ಪಂಪನ ಸಂದೇಶವನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ, ಸಮಾಜ ಕಲ್ಯಾಣ ಇಲಾಖೆಯು ಹಲವಾರು ಕಾರ್ಯಕ್ರಮಗಳನ್ನು ಕೊಟ್ಯಂತರ ಅನುದಾನ ಭರಿಸಿ ಅನುಷ್ಟಾನಗೊಳಿಸುತ್ತಿದೆ. ಜಾತಿ ವೈಷಮ್ಯದ ಹಿನ್ನೆಲೆಯಲ್ಲಿ ಇನ್ನೂ ನಮ್ಮ ಸಮಾಜದಲ್ಲಿ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಅಸ್ಪೃಶ್ಯತೆ ಆಚರಣೆಯಲ್ಲಿರುವುದು ದುರಂತಮಯ. ಜಾತಿ-ಜಾತಿಗಳ ಮಧ್ಯೆ, ಮೇಲ್ವಾತಿ-ಕೆಳಜಾತಿ ಎನ್ನುವ ಹೆಸರಿನಲ್ಲಿ, ಆಚರಣೆಗಳ ನೆಪದಲ್ಲಿ, ಅಸ್ಪೃಶ್ಯತೆ ಪಾಲಿಸುವುದು ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿರುತ್ತದೆ. ಭಾರತ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಹಲವಾರು ಕಾನೂನುಗಳನ್ನು ತಂದಿವೆ ಎಂದು ಹೇಳಿದರು.

    ದೌರ್ಜನ್ಯ ಪ್ರತಿಬಂಧ ಅಧಿನಿಯಮ-1989, 2015, ನಾಗರಿಕ ಹಕ್ಕು ಸಂರಕ್ಷಣಾ ಅಧಿನಿಯಮ-1955, ಮ್ಯಾನ್ಯುವಲ್ ಸ್ಕ್ಯಾವೆಂಜರ್ಸ ನೇಮಕಾತಿ ನಿಷೇಧ ಅಧಿನಿಯಮ-2013, ಈ  ಕಾನೂನುಗಳ ಪ್ರಕಾರ ಜಾತಿ ಭೇಧ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಕಾನೂನು ಪ್ರಕಾರ ಇಂತಹ ಅನಿಷ್ಟ ಆಚರಣೆ ಮಾಡುವವರಿಗೆ, ಪ್ರೋತ್ಸಾಹ ನೀಡುವವರಿಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಬಹುದಾಗಿದೆ ಎಂದು ಅವರು ಹೇಳಿದರು.

    ಜಾತಿ ನಿಂದನೆ ಮಾಡುವುದು, ಧಾರ್ಮಿಕ ಕ್ಷೇತ್ರ, ಪೂಜಾ ಸ್ಥಳಗಳಲ್ಲಿ ಪ್ರವೇಶ ತಡೆಯುವುದು, ಯಾವುದೇ ಧಾರ್ಮಿಕ ಸೇವೆ ಮಾಡುವುದು, ಯಾವುದೇ ಕೆರೆ, ಬಾವಿ, ಕೊಳವೆಬಾವಿ, ಬಳಕೆ ಮಾಡುವುದು ಹಾಗೂ ಈ ಜಾಗಗಳಲ್ಲಿ ಸ್ನಾನ ಮಾಡುವುದು ಹಾಗೂ ನೀರನ್ನು ಉಪಯೋಗಿಸುವುದಕ್ಕೆ ಅಡ್ಡಿಯುಂಟು ಮಾಡುವುದು. ತರವಲ್ಲದ ಕೆಲಸಕ್ಕೆ ಜಾತಿ ಆಧಾರದ ಮೇಲೆ ಒತ್ತಾಯ ಮಾಡಿದಲ್ಲಿ ಹಾಗೂ ಒತ್ತಾಯದ ಮೇರೆಗೆ ಯಾವುದೇ ಕೆಲಸಕ್ಕೆ ತೊಡಗಿಸಿದಲ್ಲಿ. * ಯಾವುದೇ ಅಂಗಡಿ, ಸಾರ್ವಜನಿಕ ಉಪಹಾರ ಗೃಹ, ಹೊಟೇಲ, ಸಾರ್ವಜನಿಕ ಮನೋರಂಜನಾ ಸ್ಥಳ, ಸಲೂನ್ (ಹೇರ್‌ಕಟಿಂಗ್) ಪ್ರವೇಶಕ್ಕೆ/ಬಳಕೆಗೆ ಅಡ್ಡಿ ಮಾಡಬಾರದು ಎಂದು ಅವರು ಹೇಳಿದರು.

   ಯಾವುದೇ ವೃತ್ತಿ, ಉದ್ಯೋಗ, ವ್ಯಾಪಾರ, ವ್ಯವಹಾರ ನಡೆಸುವುದರ ಬಗ್ಗೆ ಅಡ್ಡಿಯುಂಟು ಮಾಡುವುದು  ಸ್ಮಶಾನ ಅಥವಾ ಸುಡುಗಾಡಿನ, ಯಾವುದೇ ಸಾರ್ವಜನಿಕ ಶೌಚಾಲಯದ, ಯಾವುದೇ ರಸ್ತೆಗೆ ಸಾರ್ವಜನಿಕರು ಉಪಯೋಗಿಸಲು ಅಥವಾ ಪ್ರವೇಶಿಸಲು ಹಕ್ಕನ್ನು ಹೊಂದಿರುವ ಇತರೆ ಯಾವುದೆ ಸ್ಥಳದ ಉಪಯೋಗದ ಬಗ್ಗೆ ಅಡ್ಡಿಯುಂಟು ಮಾಡುವುದು. ಯಾವುದೇ ಸಾರ್ವಜನಿಕ ಅಥವಾ ಧಾರ್ಮಿಕ ರೂಢಿ, ಪದ್ದತಿ ಅಥವಾ ಉತ್ಸವದ ಆಚರಣೆಯ ಬಗ್ಗೆ ಅಥವಾ ಯಾವುದೇ ಧಾರ್ಮಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಭಾಗವಹಿಸುವುದು ಅಡ್ಡಿಯುಂಟು ಮಾಡುವುದು. ಈ ಮೇಲಿನ ಕಾನೂನು ಬಾಹಿರ ಕೃತ್ಯಗಳನ್ನು ಎಸಗಿದವರ ಮೇಲೆ ಕಾನೂನು ಪ್ರಕಾರ 6 ತಿಂಗಳವರೆಗೆ ಜೈಲುಶಿಕ್ಷೆ ಹಾಗೂ ದಂಡ ವಿಧಿಸಲು  ಅವಕಾಶವಿರುತ್ತದೆ. ಬುದ್ಧ, ಬಸವ, ಅಂಬೇಡ್ಕರ್ ರವರ ಕನಸಿನ ಸಮ ಸಮಾಜವನ್ನು ಕಟ್ಟೋಣ; ಸರ್ಕಾರದ ಪ್ರಯತ್ನಗಳಿಗೆ ಕೈಜೋಡಿಸೋಣ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗಾಂಧಿಜಿಯವರು ಅಸ್ಪೃಶ್ಯತೆ ನಿವಾರಣೆ ಬಗ್ಗೆ ತಿಳಿಸಿರುವ ಸಂದೇಶದ ಬಗ್ಗೆ ಕರಪತ್ರಗಳನ್ನು ಸಾರ್ವಜನಿಕರಿಗೆ ಹಂಚಿ ಅಸ್ಪೃಶ್ಯತೆ ಆಚರಣೆ ವಿರೋಧದ ಕಾನೂನಿನ ಅರಿವು ಮೂಡಿಸಲಾಯಿತು.

 ಸಮಾಜ ಕಲ್ಯಾಣ ಇಲಾಖೆಯ ಎಲ್ಲಾ ವಸತಿ ನಿಲಯಗಳು ಹಾಗೂ ಶಾಲೆಗಳಲ್ಲಿ ಸ್ವಚ್ಛತಾ ಶ್ರಮದಾನ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.  ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಸುರೇಶ್ ಕಳ್ಳಿಮನಿ, ದಲಿತ ಮುಖಂಡ ಅಡಿವೆಪ್ಪ ಸಾಲಗಲ್,ದಾದಾಸಾಬ ಬಾಗಾಯತ್,ಲಾಲಪ್ಪ ಗುಡಿಮನಿ, ಹನುಮಂತ ಪಟ್ಟೇದ, ಶಾಂತಿನಗರದ ಸರಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ  ಸುರೇಶಗೌಡ ಬಿರಾದಾರ, ಸಿದ್ಧಾರ್ಥ ಪರಣಾಕರ, ಸುರೇಶ್ ಗಚ್ಚಿನಮನಿ ಹಾಗೂ ಇತರರು ಉಪಸ್ಥಿತರಿದ್ದರು.