Friday, June 5, 2020

ತೋಟಗಾರಿಕಾ ಬೆಳೆ ಸಮೀಕ್ಷೆಯಿಂದ ಹೆಸರು ಬಿಟ್ಟುಹೋದಲ್ಲಿ, ಮಾಹಿತಿ ಸಲ್ಲಿಸಿ - ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ


ಈ ದಿವಸ ವಾರ್ತೆ
ವಿಜಯಪುರ : ಜಿಲ್ಲೆಯಲ್ಲಿ ಈಗಾಗಲೆ ಹಿಂಗಾರಿನಲ್ಲಿ ಕೈಗೊಳ್ಳಲಾದ ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಹೆಸರು ಬಿಟ್ಟುಹೋಗಿದಲ್ಲಿ ಅಂತಹವರು ಇದೇ ಜೂನ್ 15ರೊಳಗೆ ಆಯಾ ತಾಲೂಕಾ ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. 

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು 2020-21ನೇ ಸಾಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರಿಗೆ ಪರಿಹಾರಧನ ವಿತರಿಸುವ ಕುರಿತು ಜಿಲ್ಲಾಮಟ್ಟದ ಸಮಿತಿ ಸಭೆ ಅಧ್ಯಕ್ಷತೆವಹಿಸಿದ್ದ ಅವರು ಈಗಾಗಲೆ ತೋಟಗಾರಿಕೆ ಬೆಳೆಗಳಾದ ನಿಗದಿತ ಹಣ್ಣು ಮತ್ತು ತರಕಾರಿಗಳಿಗೆ ಸರ್ಕಾರವು 15 ಸಾವಿರ ರೂಗಳ ಸಹಾಯಧನ ಘೋಷಿಸಿದೆ. ಈ ಹಿನ್ನಲೆಯಲ್ಲಿ ಈ ಹಿಂದೆ ಹಿಂಗಾರಿನಲ್ಲಿ ಕೈಗೊಳ್ಳಲಾದ ಬೆಳೆ ಸಮಿಕ್ಷೆಯಿಂದ ಕಲ್ಲಂಗಡಿ ಮತ್ತು ಕರಬೂಜ್‍ಗೆ ಸಂಬಂಧಿಸಿದಂತೆ ಸಮಿಕ್ಷೆಯಿಂದ ಕೈಬಿಟ್ಟು ಹೋಗಿದ್ದಲ್ಲಿ ತಕ್ಷಣ ಅರ್ಜಿ ಸಲ್ಲಿಸಬೇಕು. ಅದರಂತೆ ಇದಕ್ಕಾಗಿ ಯಾವುದೇ ರೀತಿಯ ದಾಖಲಾತಿ ಸಲ್ಲಿಸುವ ಅವಶ್ಯಕತೆ ಕೂಡಾ ಇರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಈಗಾಗಲೆ ಕೈಗೊಂಡ ಬೆಳೆ ಸಮಿಕ್ಷೆಗೆ ಸಂಬಂಧಪಟ್ಟಂತೆ ಹಣ್ಣುಗಳಾದ ಬಾಳೆ, ಪಪ್ಪಾಯಿ, ಅಂಜೂರ, ಅನಾನಸ್, ಕಲ್ಲಂಗಡಿ ಮತ್ತು ಕರಬೂಜ್‍ಗಳಿಗೆ ಸರ್ಕಾರ ಬೆಳೆಹಾನಿ ಪರಿಹಾರ ಘೋಷಿಸಿದೆ. ಅದರಂತೆ ತರಕಾರಿ ಬೆಳೆಗಳಾದ ಸಿಹಿಕುಂಬಳ, ಎಲೆಕೋಸು, ದಪ್ಪುಮೆಣಸಿನಕಾಯಿ, ಹೂಕೋಸು, ಹಸಿರುಮೆಣಸಿನಕಾಯಿ, ಟೊಮ್ಯಾಟೊ, ಈರುಳ್ಳಿ ಹಾಗೂ ಕ್ಯಾರೆಟ್‍ಗಳ ತರಕಾರಿ ಬೆಳೆಗಾರರಿಗೆ ಪರಿಹಾರಧನ ಕಾರ್ಯಕ್ರಮದಡಿಯಲ್ಲಿ ಸರ್ಕಾರ ಪರಿಹಾರ ನೀಡಲು ಘೋಷಿಸಿದೆ. ಸಧ್ಯ ಸಮಿಕ್ಷೆಯನ್ವಯ 285.67 ಹೆಕ್ಟೆರ್ ತರಕಾರಿಬೆಳೆ ಮತ್ತು 910.54 ಹೆಕ್ಟೆರ್ ವಿಸ್ತಿರ್ಣದಲ್ಲಿ ಹಣ್ಣು ಬೆಳೆ ಇದ್ದು ಅರ್ಹರಿಗೆ ಪರಿಹಾರ ದೊರೆಯಲಿದೆ. 

ಅದರಂತೆ ಈರುಳ್ಳಿ ಮತ್ತು ಇತರೆಬೆಳೆಗಳ ಸಮಿಕ್ಷೆ ಈಗಾಗಲೇ ಕೈಗೊಂಡಿದ್ದು ಅರ್ಹ ಫಲಾನುಭವಿಗಳಿಗೆ ಸರ್ಕಾರದ ಈ ಸೌಲಭ್ಯ ದೊರೆಯಲು ಸಮಿಕ್ಷಾ ವರದಿಯನ್ನು ಮರು ಪರಿಶೀಲಿಸಿ ಸೂಕ್ತಕ್ರಮ ಕೈಗೊಳ್ಳಬೇಕು. ಆಯಾ ಗ್ರಾಮಪಂಚಾಯತವಾರು ಬೆಳೆಸಮಿಕ್ಷಾ ವರದಿಯನ್ನು ಪ್ರಕಟಿಸಿದ್ದು, ಈ ಕುರಿತಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದಲ್ಲಿ ಆಯಾ ತಾಲೂಕಾ ತೋಟಗಾರಿಕೆ ಮತ್ತು ಹೋಬಳಿ ಮಟ್ಟದ ಅಧಿಕಾರಿಗಳಿಗೆ ಭೇಟಿಮಾಡಿ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು. 

ತೋಟಗಾರಿಕಾ ಬೆಳೆ ಸಮೀಕ್ಷೆಯಲ್ಲಿ ಹೆಸರುಗಳು ಬಿಟ್ಟುಹೊದಲ್ಲಿ ವಿಜಯಪುರ ತಾಲೂಕಾ ತೋಟಗಾರಿಕೆ ಅಧಿಕಾರಿ ಶ್ರೀಮತಿ ಶಾಲಿನಿ ಎಸ್ ಮೋ.ಸಂ: 9535185999, ಇಂಡಿ ತಾಲೂಕಿನ ಶ್ರೀ. ಆರ್.ಡಿ ಹಿರೇಮಠ ಮೋ.ಸಂ: 8123194479, ಸಿಂದಗಿ ತಾಲೂಕಿನ ಅಧಿಕಾರಿ ಶ್ರೀ ಅಮೋಘ ಹಿರೆಕುರುಬರ ಮೋ.ಸಂ: 8971766033, ಬ.ಬಾಗೇವಾಡಿ ಅಧಿಕಾರಿ ಶ್ರೀ. ಸಿ.ಬಿ ಪಾಟೀಲ ಮೋ.ಸಂ: 9845215362, ಮುದ್ದೆಬಿಹಾಳ ಅಧಿಕಾರಿ ಶ್ರೀ ಸುಭಾಸ ಟಾಕಳೆ ಮೋ.ಸಂ: 9972719844 ಇವರಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ ಎಂದರು. 

ಸಭೆಯಲ್ಲಿ ತೋಟಗಾರಿಕೆ ಉಪನಿರ್ದೇಶಕ ಸಂತೋಷ ಇನಾಂದಾರ್, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.  

No comments:

Post a Comment