Thursday, June 4, 2020

ಕಂಟೇನ್ಮೆಂಟ್ ವಲಯಗಳಲ್ಲಿನ ನಾಗರಿಕರು ಆರೋಗ್ಯ ಸಮೀಕ್ಷಾ ತಂಡಗಳಿಗೆ ಅಧಿಕೃತ ಮಾಹಿತಿ ನೀಡಿ ಸಹಕರಿಸಿ’’ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ



ಈ ದಿವಸ ವಾರ್ತೆ
ವಿಜಯಪುರ: ಜಿಲ್ಲೆಯ ಕಂಟೇನ್ಮೆಂಟ್ ವಲಯಗಳಲ್ಲಿ ಆರೋಗ್ಯ ಸಮೀಕ್ಷೆಗಾಗಿ ಆಗಮಿಸುವ ತಂಡಗಳಿಗೆ ಸಮರ್ಪಕ ಮತ್ತು ವಸ್ತುನಿಷ್ಠ ಮಾಹಿತಿ ನೀಡುವ ಮೂಲಕ ಸಹಕರಿಸುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮನವಿ ಮಾಡಿದ್ದಾರೆ. 

ಇಂದು ನಗರದ ಅಲ್ಲಾಪೂರ ಬೇಸ್ ಹಾಗೂ ಪೈಲ್ವಾನ್‍ಗಲ್ಲಿ ಕಂಟೇನ್ಮೆಂಟ್ ವಲಯಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿದ ಅವರು ಕೋವಿಡ್-19 ಅಪಾಯಕಾರಿ ಮತ್ತು ಸಾಂಕ್ರಾಮಿಕ ರೋಗವಾಗಿರುವ ಹಿನ್ನಲೆಯಲ್ಲಿ ಎಲ್ಲರು ಒಟ್ಟುಗೂಡಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಈ ವಲಯಗಳಲ್ಲಿ ಪ್ರತಿ ಮನೆಗೆ ಆರೋಗ್ಯ ಸಮೀಕ್ಷೆಗಾಗಿ ಆರೋಗ್ಯ ಕಾರ್ಯಕರ್ತರು ಭೇಟಿ ನೀಡುತ್ತಿದ್ದು, ಅವರಿಗೆ ಸಹಕರಿಸುವಂತೆ ತಿಳಿಸಿದ್ದಾರೆ.

ಜಿಲ್ಲೆಯ ಕಂಟೇನ್ಮೆಂಟ್ ವಲಯಗಳಲ್ಲಿ ಆಶಾ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಮಹಿಳಾ ಕಾರ್ಯಕರ್ತೆಯರು ಆರೋಗ್ಯ ಸಮೀಕ್ಷೆ ಕೈಗೊಳ್ಳುತ್ತಿದ್ದು, ಇವರಿಗೆ ಸ್ವ ಸಹಾಯ ಗುಂಪುಗಳು ಮತ್ತು ಸಮೂದಾಯ ಕಾರ್ಯಕರ್ತರು ಕೈಜೋಡಿಸಿ ಸೂಕ್ತ ಆರೋಗ್ಯ ಮಾಹಿತಿ ಸಂಗ್ರಹಿಸಬೇಕು. ಸಾರ್ವಜನಿಕರು ಕೂಡಾ ಯಾವುದೇ ರೀತಿಯ ಕಾನೂನಿನ ರಿತ್ಯ ಕ್ರಮಕ್ಕೆ ಅವಕಾಶ ನೀಡದೆ ತೀವ್ರ ಉಸಿರಾಟ ತೊಂದರೆ, ನೆಗಡಿ, ಕೆಮ್ಮು, ಜ್ವರದ ಬಗ್ಗೆ ವಸ್ತುನಿಷ್ಠ ಮಾಹಿತಿ ನೀಡುವಂತೆ ಸಲಹೆ ನೀಡಿದರು.

ಇಂತಹ ಆರೋಗ್ಯ ಸಂಬಂಧಿತ ಲಕ್ಷಣಗಳನ್ನು ಹೊಂದಿದವರು ಯಾವುದೇ ಸಂದರ್ಭದಲ್ಲಿ ಕಂಟೇನ್ಮೆಂಟ್ ವಲಯದ ಖಾಸಗಿ ಆಸ್ಪತ್ರೆಯ ವೈದ್ಯರಲ್ಲಿ ಚಿಕಿತ್ಸೆ ಪಡೆಯುವಂತಿಲ್ಲ. ಈ ಕುರಿತು ತಕ್ಷಣ ಆರೋಗ್ಯ ಸಮೀಕ್ಷಾ ತಂಡಕ್ಕೆ ಅಥವಾ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡುವಂತೆ ಕಟ್ಟುನಿಟ್ಟಿನ ಸೂಚನೆಯನ್ನು ಅವರು ನೀಡಿದ್ದಾರೆ. 

ಈ ಕಂಟೇನ್ಮೆಂಟ್ ವಲಯಗಳಲ್ಲಿನ ಸಾರ್ವಜನಿಕರ ಕುಂದುಕೊರತೆಗಳಿಗೆ ಸ್ಪಂದಿಸಲಾಗುವುದು. ಅವಶ್ಯಕ ಆಹಾರ ಕಿಟ್‍ಗಳನ್ನು ಪೂರೈಸಲಾಗುವುದು. ಶೌಚಾಲಯಗಳ ನಿರ್ಮಾಣಕ್ಕೆ ಪಾಲಿಕೆ ಆಯುಕ್ತರಿಂದ ಸೂಕ್ತ ಕ್ರಮ ಆಗಲಿದೆ ಎಂದ ಅವರು ಸಾರ್ವಜನಿಕರು ಯಾವುದೆ ರೀತಿಯ ತಪ್ಪು ಮಾಹಿತಿ ನೀಡದೆ ಆರೋಗ್ಯ ಸಮೀಕ್ಷಾ ತಂಡಗಳಿಗೆ ಅಧಿಕೃತ ಮಾಹಿತಿ ನೀಡಿ ಕೋವಿಡ್-19 ನಿಯಂತ್ರಣಕ್ಕೆ ನೆರವಾಗುವಂತೆ ಸಲಹೆ ನೀಡಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ಅವರು ಮಾತನಾಡಿ ಕಂಟೇನ್ಮೆಂಟ್ ವಲಯಗಳಲ್ಲಿನ ಸಾರ್ವಜನಿಕರು ಯಾವುದೇ ಪರಿಸ್ಥಿತಿಯಲ್ಲಿ ಮನೆಗಳಿಂದ ಹೊರಗೆ ಬಂದು ತಿರುಗಾಡಬಾರದು. ಆರೋಗ್ಯ ಸಮೀಕ್ಷೆಗೆ ಸರುವ ತಂಡಗಳಿಗೆ ಅವಶ್ಯಕ ಮಾಹಿತಿ ನೀಡುವ ಮೂಲಕ ಸಹಕರಿಸಬೇಕು. ಯಾವುದೆ ರೀತಿಯ ತಪ್ಪು ಮಾಹಿತಿ ನೀಡುವುದಾಗಲಿ, ಅಸಹಕಾರ ಕಂಡುಬಂದಲ್ಲಿ ತಕ್ಷಣ ಪ್ರಕರಣ ದಾಖಲಿಸುವುದಾಗಿ ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮೂದಾಯ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು ಸ್ವಯಂ ಪ್ರೇರಣೆಯಿಂದ ಆರೋಗ್ಯ ಸಮೀಕ್ಷಾ ತಂಡಗಳಿಗೆ ಸಹಕರಿಸುವುದಾಗಿ ಒಪ್ಪಿಕೊಂಡರು. ಈ ಸಂದರ್ಭದಲ್ಲಿ ಡಿವೈಎಸ್‍ಪಿ ಗಳಾದ ಲಕ್ಷ್ಮಿನಾರಾಯಣ, ಗೋಲ್‍ಗುಂಬಜ್ ಡಿವೈಎಸ್‍ಪಿ ಸುಲ್ಫಿ, ಮಹಾನಗರ ಪಾಲಿಕೆ ಆಯುಕ್ತ ಹರ್ಷಾ ಶಟ್ಟಿ, ವಿಶ್ವ ಆರೋಗ್ಯ ಸಂಸ್ಥೆ ಕಲ್ಸಲಟಂಟ್ ಡಾ. ಮುಕುಂದ ಗಲಗಲಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಕವಿತಾ, ಪಿಎಸ್‍ಐ ರಾಜೇಶ ಚವ್ಹಾಣ, ಪೈಲ್ವಾನ್‍ಗಲ್ಲಿ ಜಮಾತ್ ಮುಖ್ಯಸ್ಥ ಮಹೇಬೂಬ್ ಪಾಷಾ ಹಕಿಂ, ಶ್ರೀ ಪೀಟರ್ ಅಲೆಜ್ಸಾಂಡರ್, ಡಾ. ಝೆನಂತ್, ಡಾ. ಗುಂದಬಾವಡಿ, ಡಾ. ಬಾಲಕೃಷ್ಣ, ಡಾ. ಸಂತೋಷ ಶಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು.

No comments:

Post a Comment