ವಿಜಯಪುರ: ಪುಸ್ತಕಗಳು ನಮ್ಮ ದಿನನಿತ್ಯದ ಗೆಳೆಯರಾಗಬೇಕು, ಪುಸ್ತಕಪ್ರೀತಿಯಿಂದ ಮನುಷ್ಯರೂಪದ ಜೀವಿಯೊಬ್ಬ ನಿಜವಾದ ಮನುಷ್ಯನಾಗಿ ರೂಪುಗೊಳ್ಳುವುದು ಸಾಧ್ಯವಾಗುತ್ತದೆಂದು ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಸಚಿವರು ಹಾಗೂ ಈ ಹಿಂದಿನ ವಿಜಯಪುರ ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳಾಗಿದ್ದ ಸೋಮಲಿಂಗ ಗೆಣ್ಣೂರ ಹೇಳಿದರು.
ವಿಜಯಪುರದ ನವರಸಪುರದಲ್ಲಿರುವ ತಿಕೋಟಾದ ನೇತ್ರಾಧಿಕಾರಿ ಡಾ. ಪ್ರಕಾಶ ಪರಣಾಕಾರ ಅವರ ಮನೆಯಲ್ಲಿ ನಡೆದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಪ್ರತಿಯೊಂದು, ನಿಜವಾದ ಪುಸ್ತಕದ ಒಳಗೂ ನಮ್ಮೊಂದಿಗೆ ಸಂವಾದಕ್ಕೆ ಹಾತೊರೆಯುವ ಒಂದು ವ್ಯಕ್ತಿತ್ವ ಮತ್ತು ಮನಸ್ಸಿದೆ ದಿಕ್ಕು ತಪ್ಪಿಸುವ, ಮೌಢ್ಯಬಿತ್ತುವ ಕಂದಾಚಾರಕ್ಕೆ ದೂಡುವ ಪುಸ್ತಕಗಳ ತಿರಸ್ಕರಿಸಿ, ವೈಚಾರಿಕ ಹಾಗೂ ವೈಜ್ಞಾನಿಕತೆ ಬಿತ್ತುವ ಪುಸ್ತಕಗಳ ಓದಬೇಕು ಎಂದರು.
ಈ ಸಂದರ್ಭ ಡಾ. ಮಹಾಂತೇಶ ಬಿರಾದಾರ ಮಾತನಾಡಿ, ಒಂದು ಪುಸ್ತಕವನ್ನೋದುವುದೆಂದರೆ ಬಸವಣ್ಣನ ಸಮಸಮಾಜವನು ಮುನ್ನಡೆಸುವುದು ಎಂದರ್ಥ. ಅದೊಂದು ಹೊಸ ಅನುಭವ ಹಾಗೂ ಪ್ರಪಂಚದಲ್ಲಿ ಸಹೃದಯರು ಕೈಗೊಳ್ಳುವ ಪರ್ಯಟನವೋ ಅಥವಾ ರಸಯಾತ್ರೆಯೋ ಆಗಿರುತ್ತದೆ ಎಂದರು.
ಕನ್ನಡ ಪುಸ್ತಕ ಪ್ರಾಧಿಕಾರದ ವಿಜಯಪುರ ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸದಸ್ಯ ಪ್ರೊ. ಬಸವರಾಜ ಜಾಲವಾದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪುಸ್ತಕ ಓದುವವನು ಒಂದೇ ಜನ್ಮದಲ್ಲಿ ಸಾವಿರ ಜೀವನ ಕಾಣಬಲ್ಲ, ಆದರೆ ಪುಸ್ತಕ ಓದದವನು ಒಂದು ಹುಟ್ಟಿನಲ್ಲಿ ಕೇವಲ ಒಂದೇ ಜೀವನ ಅನುಭವಿಸಬಲ್ಲ’ ಎಂದು ನೆನಪಿಸಿ, ಬುದ್ಧ, ಬಸವ, ಅಂಬೇಡ್ಕರರೇ ಈ ಜನ್ಮಕೆಷ್ಟು ಪುಸ್ತಕ ಓದಿದ ಬಳಿಕ ಇವನಾರವ, ಇವನಾರವ ಎನ್ನದೇ ಇಂವ ನಮ್ಮಂವ, ಇಂವ ನಮ್ಮವ ಎಂದಾದರೆ ಓದಿದ್ದಕ್ಕೂ ಸಾರ್ಥಕವಾಯಿತು ಎಂದು ಪುಸ್ತಕದ ಮಹತ್ವ ಸಾರಿದರು.
ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಕಕಮರಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀ ಆತ್ಮಾರಾಮ ಮಹಾಸ್ವಾಮಿಗಳು ಕನ್ನಡ ಪುಸ್ತಕ ಪ್ರಾಧಿಕಾರದವರಿಗೆ ಅಭಿನಂದನೆ ಸಲ್ಲಿಸಿ ಮಾತನಾಡಿ, ಇದೊಂದು ಆದರ್ಶ ಕಾರ್ಯಕ್ರಮ ಪ್ರತಿಯೊಬ್ಬರ ಮನೆಯಲ್ಲೂ ಈ ತರದ ಕಾರ್ಯಕ್ರಮಗಳನ್ನ ಮಾಡಿದಾಗ ಪುಸ್ತಕ ಪ್ರೀತಿಯ ಬಗ್ಗೆ ಒಲವು ಮೂಡುತ್ತದೆ ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಗ್ರಂಥಾಲಯ ಮಾಡಿಕೊಳ್ಳಬೇಕೆಂದು ಕರೆಕೊಟ್ಟರು. ಸ್ವಾಮಿಗಳಾದವರ ನಿಜವಾದ ಅಭಿಲಾಶೆಯೂ ಇದೇ ಆಗಿರುತ್ತದೆ. ಸಮಾಜ ಈ ತರದ ಕಾರ್ಯಕ್ರಮ ಹಮ್ಮಿಕೊಂಡು ಕತ್ತಲಿನಿಂದ ಹೊರಬರಲು ಕರೆಕೊಟ್ಟರು.
ಯರಡೋಣದ ಕುಮಾರೇಶ್ವರ ಸ್ವಾಮಿಗಳು, ಪ್ರಗತಿಪರ ರೈತ ಮಲ್ಲಿಕಾರ್ಜುನ ಹಂಜಗಿ, ಶ್ರೀಧರ್ ಮುರಾಳೆ, ಬಾಬೂರಾವ ಮಹಾರಾಜ, ವೀರೇಶ ಹಿರೇಮಠ ವೇದಿಕೆ ಮೇಲಿದ್ದರು.
ಬಸವರಾಜ ಬೆಳಗಲಿ ಸ್ವಾಗತಿಸಿದರು.ಸಿದ್ಧಾರ್ಥ ಪರಣಾಕರ ವಂದಿಸಿದರು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :
ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:
Post a Comment