Saturday, September 5, 2026

ಅರ್ಜುನ್ ರಾಠೋಡ್ ಅವರನ್ನು ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಿಸಲು ಆಗ್ರಹ


ವಿಜಯಪುರ: ಬಂಜಾರ ಸಮಾಜದ ಹಿರಿಯ ನಾಯಕ ಹಾಗೂ ಕಾಂಗ್ರೆಸ್ ಪಕ್ಷದ ಸಕ್ರಿಯ ಮುಖಂಡರಾದ ಶ್ರೀ ಅರ್ಜುನ್ ರಾಠೋಡ್ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ವಿಜಯಪುರ ಜಿಲ್ಲಾ ಬಂಜಾರ ಸಮಾಜ ಹಾಗೂ ಕಾಂಗ್ರೆಸ್ ಬಂಜಾರಾ ಕಾರ್ಯಕರ್ತರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಚಿವ ರುದ್ರಪ್ಪ ಲಮಾಣಿ ಹಾಗೂ ವಿಜಯಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಮತ್ತು ಪಕ್ಷದ ಪದಾಧಿಕಾರಿಗಳಿಗೆ ಮನವಿ ಸಲ್ಲಿಸಲು ಸಮಾಜದ ಮುಖಂಡರು ಮುಂದಾಗಿದ್ದಾರೆ.
ಅರ್ಜುನ್ ರಾಠೋಡ್ ಅವರು ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಬಂಜಾರ ಸಮಾಜದ ವಿವಿಧ ಸಮಸ್ಯೆಗಳು, ಹಕ್ಕುಗಳು ಹಾಗೂ ಅಭಿವೃದ್ಧಿ ವಿಚಾರಗಳ ಕುರಿತು ನಿರಂತರವಾಗಿ ಧ್ವನಿ ಎತ್ತಿಕೊಂಡು ಬಂದಿದ್ದಾರೆ. ಅವರು ಬಂಜಾರ ಮಹಾಸಭೆಯ ಅಧ್ಯಕ್ಷರಾಗಿ ಹಾಗೂ ವಿಜಯಪುರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿ ಸಮಾಜ ಮತ್ತು ಪಕ್ಷದ ಸಂಘಟನೆಗೆ ಸೇವೆ ಸಲ್ಲಿಸಿದ್ದಾರೆ ಎಂದು ಮುಖಂಡರು ತಿಳಿಸಿದ್ದಾರೆ.
ವಿಜಯಪುರ ಜಿಲ್ಲೆಯಲ್ಲಿ ಬಂಜಾರ ಸಮಾಜದ ಮತದಾರರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದ್ದು, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಸಮಾಜದ ಮತಗಳು ನಿರ್ಣಾಯಕವಾಗಿವೆ. ಅರ್ಜುನ್ ರಾಠೋಡ್ ಅವರು ಪ್ರಬಲ ಕಾಂಗ್ರೆಸ್ ಆಕಾಂಕ್ಷಿಯಾಗಿದ್ದರೂ ಪಕ್ಷದ ಟಿಕೆಟ್ ದೊರೆಯದ ಸಂದರ್ಭದಲ್ಲಿ ಪಕ್ಷದ ನಿಷ್ಠೆ ತೋರಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಪರವಾಗಿ ಸಚಿವ ಎಂ.ಬಿ. ಪಾಟೀಲ ಹಾಗೂ ಅರ್ಜುನ್ ರಾಠೋಡ್ ಅವರ ನೇತೃತ್ವದಲ್ಲಿ ಬಂಜಾರ ಸಮಾಜದ ಬೃಹತ್ ಸಮಾವೇಶ ಆಯೋಜಿಸಿ ಬೆಂಬಲ ನೀಡಲಾಗಿತ್ತು ಎಂದು ಮುಖಂಡರು ಹೇಳಿದ್ದಾರೆ.
ಪಕ್ಷದ ಮೇಲಿನ ನಿಷ್ಠೆ, ಸಮಾಜ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ನಾಯಕತ್ವದ ಅನುಭವವನ್ನು ಪರಿಗಣಿಸಿ ಅರ್ಜುನ್ ರಾಠೋಡ್ ಅವರಿಗೆ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಬಂಜಾರ ಸಮಾಜಕ್ಕೆ ಸೂಕ್ತ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಈ ಮನವಿಗೆ ಜಗನು ಮಹಾರಾಜ, ಸೋಮನಿಂಗ್ ಸ್ವಾಮೀಜಿ, ಧನಶಿಂಗ ಮಹಾರಾಜ್, ಗೋಪಾಲ ಮಹಾರಾಜರು, ಅಮರ್ಶಿಂಗ ಮಹಾರಾಜರು, ಸಂಜು ಮಹಾರಾಜರು, ಪ್ರಕಾಶ ಮಹಾರಾಜರು, ಭೀಮಶಿಂಗ ಮಹಾರಾಜರು ಸೇರಿದಂತೆ ಸಮಾಜದ ಧಾರ್ಮಿಕ ಮುಖಂಡರು ಹಾಗೂ ಆಡಿ ರಾಜೇಂದ್ರಪ್ರಸಾದ, ಬಿಬಿ ನಾಯಕ, ರಾಜಪಾಲ ಚವಾಣ್, ಡಿ.ಎಲ್. ಚವಾಣ್, ಶಂಕರ ಚವಾಣ್, ರಾಜು ಜಾಧವ್, ಮಲ್ಲಿಕಾರ್ಜುನ ನಾಯಕ, ಈಶ್ವರ ಜಾಧವ್, ಶೇಖರ ನಾಯ್ಕ್, ಲಿಂಬಾಜಿ ರಾಠೋಡ, ವಾಮನ ಚವಾಣ್, ಮಹಾದೇವ ರಾಠೋಡ, ಎಸ್.ಆರ್. ನಾಯ್ಕ್, ಎಂ.ಎಸ್. ನಾಯಕ್, ಅಶೋಕ ರಾಠೋಡ, ನಾತು ಪವಾರ, ಪದ್ದು ಚವಾಣ್, ಸತೀಶ ನಾಯಕ, ತುಕಾರಾಮ್ ರಾಠೋಡ, ಪ್ರಕಾಶ ರಾಠೋಡ, ಗೋವಿಂದ ರಾಠೋಡ, ಮಿಟ್ಟು ಚವಾಣ್, ಅನಿಲ್ ಚವಾಣ್, ಅಮೇಶಿ ರಾಠೋಡ, ಸುನೀಲ್ ಚವಾಣ್, ರಾಜು ಪವಾರ, ಸುರೇಶ ಪವಾರ ಸೇರಿದಂತೆ ಹಲವು ಸಮಾಜದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಬಂಜಾರ ಸಮಾಜದ ಹಿತಾಸಕ್ತಿ ಹಾಗೂ ಜಿಲ್ಲೆಯ ರಾಜಕೀಯ ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಅರ್ಜುನ್ ರಾಠೋಡ್ ಅವರನ್ನು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ವಿಜಯಪುರ ಜಿಲ್ಲಾ ಬಂಜಾರ ಸಮಾಜದ ಮುಖಂಡ ಪ್ರಕಾಶ ಗಂಗಾರಾಮ್ ರಾಠೋಡ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.



No comments:

Post a Comment