Friday, June 5, 2026

ಸಾಧಕರನ್ನು ಪ್ರಶಸ್ತಿಗಳು ಹುಡುಕಿಕೊಂಡು ಬರಬೇಕು: ಚನ್ನಪ್ಪ ಕಟ್ಟಿ

ವಿಜಯಪುರ: ಪ್ರಶಸ್ತಿಗಳು ಸಾಧಕರನ್ನು ಹುಡುಕಿಕೊಂಡು ಬರಬೇಕೇ ವಿನಃ ಪ್ರಶಸ್ತಿಗಳ ಬೆನ್ನತ್ತಿ ಅವರು ಹೋಗಬಾರದು ಎಂದು ಬೆಂಗಳೂರಿನ ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಚನ್ನಪ್ಪ ಕಟ್ಟಿ ಹೇಳಿದರು.

ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಕಲಬುರಗಿಯ ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನ, ದಲಿತ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡ ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ಪ್ರದಾನ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಪ್ರಶಸ್ತಿಯು ಲೇಖಕರ ಸಾಮಾಜಿ ಜವಾಬ್ದಾರಿಯನ್ನು ಹೆಚ್ಚಿಸುವುದಲ್ಲದೇ ಸಾಧಕರನ್ನು ಪ್ರೋತ್ಸಾಹಿಸಿದಂತಾಗುತ್ತದೆ. ಪ್ರೊ. ಮಲ್ಲೇಪುರಂ ಸಾಂಸ್ಕೃತಿಕ ಪ್ರತಿಷ್ಠಾನದಿಂದ ಈಗಾಗಲೇ ಹಲವು ನಾಡಿನ ಖ್ಯಾತನಾಮ ಹಿರಿಯ ಲೇಖಕರಿಗೆ ಪ್ರಶಸ್ತಿಯನ್ನು ನೀಡಿ, ಅವರನ್ನು ಗೌರವಿಸಿದ್ದು ಕನ್ನಡ ನಾಡು, ನುಡಿಗೆ ಹಿರಿಮೆ ತಂದAತಾಗಿದೆ. ಕಳೆದ ೧೧ ವರ್ಷದ ಹಿಂದೆ ರಾಯಚೂರಿನಲ್ಲಿ ನಡೆದ ಸಮಾರಂಭದಲ್ಲಿ ನನಗೂ ಈ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ. ಸದ್ಯ ಈ ಪ್ರಶಸ್ತಿಯನ್ನು ಮತ್ತೊಬ್ಬ ಸಾಧಕಿಗೆ ಪ್ರದಾನ ಮಾಡುವ ಭಾಗ್ಯ ದೊರಕಿರುವುದು ಸಂತಸದ ಸಂಗತಿ ಎಂದರು.
ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ವೆಂಕಟೇಶ ಮಾತನಾಡಿ, ಜವತ್ತಿನ ಜನರ ಬದುಕು ಸಂಕೀರ್ಣವಾಗಿದೆ. ಎಐ ತಂತ್ರಜ್ಞಾನವು ಮನುಷ್ಯನನ್ನು ಆಳುತ್ತಿದೆ. ಮನುಷ್ಯ ತಂತ್ರಜ್ಞಾನದ ಅಡಿಯಾಳಾಗಬಾರದು, ತಂತ್ರಜ್ಞಾನವೇ ಮನುಷ್ಯನ ಅಡಿಯಲ್ಲಿರಬೇಕು ಎಂದು ಹೇಳಿದರು.


ಮುಂಬರುವ ದಿನಗಳಲ್ಲಿ ಜನರು ಒಂದೆಡೆ ಸೇರಿ ಸಾಹಿತ್ಯ ಸಂಗೀತದAತಹ ಸಮಾರಂಭಗಳಿಗೆ ಬರುವುದು ತುಂಬಾ ವಿರಳವಾಗುವುದು. ಒಂದೆಡೆ ಸೇರಿ ಬದುಕಿನ ಕಷ್ಟ, ಸುಖಗಳನ್ನು ಹಂಚಿಕೊಳ್ಳುವ ಕಾಲ ಮರೆಯಾಗುವುದು. ಮನುಷ್ಯ ಒಂಟಿಯಾಗಿ ತಂತ್ರಜ್ಞಾನದ ಜೊತೆಗೆ ಯಾಂತ್ರಿಕ ಜೀವನ ನಡೆಸುತ್ತಾನೆ. ಇದರಿಂದ ಪಾರಾಗಲು ಪ್ರತಿಯೊಬ್ಬರು ಪುಸ್ತಕದೊಂದಿಗೆ ಜೀವನ ನಡೆಸಬೇಕು ಎಂದರು.
ಕಲಬುರಗಿ ವಿವಿಯ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ಪ್ರೊ. ಮಲ್ಲೇಪುರಂ ಸಾಹಿತ್ಯ ಪ್ರಶಸ್ತಿ ನಾಡಿನ ಪ್ರತಿಷ್ಠ ಪ್ರಶಸ್ತಿಯಾಗಿದೆ. ನಾಡಿನ ನೈಜಪ್ರತಿಭೆಗಳನ್ನು ಗುರುತಿಸಿ ಗೌರವಿಸುವುದು ವಾಡಿಕೆಯಾಗಿದೆ. ಈ ಹಿಂದೆ ಹಲವಾರು ನಾಡಿನ ಗಣ್ಯ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಸದ್ಯ ಸುಜಾತಾ ಚಲವಾದಿ ಅವರಿಗೆ ಪ್ರಶಸ್ತಿ ನೀಡುತ್ತಿರುವುದು ಮಹಿಳಾ ಸಬಲೀಕರಣಕ್ಕೆ ಒತ್ತುನೀಡಿದಂತಾಗಿದೆ. ದಲಿತ ಸಮುದಾಯದ ಮಹಿಳೆಯರು ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಕೊಳ್ಳಬೇಕು ಎಂದು ಹೇಳಿದರು.
ಪ್ರೊ. ಮಲ್ಲೇಪುರಂ ವೆಂಕಟೇಶ ಅವರು ೭೫ ನೇ ವರ್ಷಕ್ಕೆ ಕಾಲಿಡುತ್ತಿರುವ ಈ ಸಂದರ್ಭವನ್ನು ಸಾಂಸ್ಕೃತಿಕ ಹಬ್ಬದ ಪ್ರತೀಕವಾಗಿದೆ ಎಂದು ಬಣ್ಣಿಸಿದರು.
ಧಾರವಾಡ ಕರ್ನಾಟಕ ವಿವಿಯ ಪ್ರಾಧ್ಯಾಪಕ ಡಾ. ನಿಂಗಪ್ಪ ಮುದೇನೂರ ಉಪನ್ಯಾಸ ನೀಡಿ ಮಾತನಾಡಿ, ಡಾ. ಸುಜಾತಾ ಚಲವಾದಿ ಅವರ ಪ್ರಮುಖ ಕೃತಿಗಳಾದ ಲಚಮ್ಮವ್ವ ಮತ್ತು ಇತರೆ ಕಥೆಗಳು, ಕೊರಗು, ನಿರ್ಭಯಲ ಬೆರಗು, ಬುದ್ಧ ಇದ್ದನಲ್ಲಿ ಈ ಕೃತಿಗಳಲ್ಲಿರುವ ಸಾಹಿತ್ಯಿಕ ಮೌಲ್ಯಗಳನ್ನು ವಿಮರ್ಶಾತ್ಮಕವಾಗಿ ವಿವರಿಸಿ, ಲೇಖಕಿಯ ಬರಹದ ವಿಸ್ತಾರವನ್ನು ಮತ್ತು ಅವರ ಚಿಂತನಾ ಕ್ರಮವನ್ನು ಪರಿಚಯಿಸಿದರು.
ಇದೇ ಸಂದರ್ಭ ಲೇಖಕಿ ಡಾ. ಸುಜಾತಾ ಚಲವಾದಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರದ ಅಧ್ಯಕ್ಷ ಎಂ.ಎನ್. ಮದಭಾವಿ ಅಧ್ಯಕ್ಷತೆ ವಹಿಸಿದ್ದರು.
ಪ್ರೊ. ಮಲ್ಲೇಪುರಂ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ನಾಗರಾಜ, ಅನಿಲ ಹೊಸಮನಿ, ಅಭಿಷೇಕ ಚಕ್ರವರ್ತಿ, ಡಾ. ಎಂ.ಎA. ಪಡಶೆಟ್ಟಿ, ಶ್ರೀಕಾಂತ ಹೊಸಮನಿ, ರವಿ ಕಿತ್ತೂರ ಸೇರಿದಂತೆ ಇತರರು ಇದ್ದರು.

ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ :

ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.

No comments:

Post a Comment