Saturday, September 17, 2022

ವಿಶ್ವಕರ್ಮ ದೇವತೆಗಳ ಇಂಜಿನಿಯರ್ ; ಪತ್ರಕರ್ತ ಕಲ್ಲಪ್ಪ‌ ಶಿವಶರಣ

 

ಈ ದಿವಸ ವಾರ್ತೆ

ವಿಜಯಪುರ: ಕಾರ್ಮಿಕ ಸಮುದಾಯದಲ್ಲಿ ವಿಶ್ವಕರ್ಮ ದಿನಾಚರಣೆಗೆ ಹೆಚ್ಚಿನ ಮಹತ್ವವಿದೆ. ಯಂತ್ರಗಳ ಸುಗಮ ಮತ್ತು ಸುರಕ್ಷಿತ ಕೆಲಸದ ಜೊತೆಗೆ ತಮ್ಮ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸಲು ವಿಶ್ವಕರ್ಮನನ್ನು ಪೂಜಿಸುವ ಸಂಪ್ರದಾಯ ಇದೆ ಎಂದು ಯುವ ಪತ್ರಕರ್ತರಾದ ಕಲ್ಲಪ್ಪ ಶಿವಶರಣ ಹೇಳಿದರು.

        ಅವರು ತಾಲೂಕಿನ ನಾಗಠಾಣ ಗ್ರಾಮದ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ವಿಶ್ವಕರ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

      ವಿಶ್ವಕರ್ಮ ಭೂಮಿಯಲ್ಲಿ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದು ಮಾದರಿಯಾಗಿದೆ ಎಂದು ಹೇಳಿದರು.



         ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ವಿಶ್ವಕರ್ಮರು ದೈವಿಕ ಬಡಗಿ, ದೇವತೆಗಳ ಇಂಜಿನಿಯರ್ ಆಗಿ, ಯಂತ್ರಶಾಸ್ತ್ರ ಮತ್ತು ವಾಸ್ತುಶಿಲ್ಪದ ವಿಜ್ಞಾನವಾದದ ಪ್ರತಿಪಾದಕರಾಗಿದ್ದಾರೆ. ಅವರ ಪರಿಶ್ರಮ ಹಾಗೂ ಕೌಶಲ್ಯಯುತ ಜೀವನದ ಮಾರ್ಗವನ್ನು  ನಾವೆಲ್ಲರೂ ಅನುಸರಿಸಬೇಕಾಗಿದೆ ಎಂದು ಹೇಳಿದರು.

         ಶಾಲಾ ಮುಖ್ಯ ಶಿಕ್ಷಕ ಸುರೇಶಗೌಡ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸುನಂದಾ ಹುಣಶ್ಯಾಳ, ಶಿಕ್ಷಕರಾದ ಎಂ ಎಸ್ ಪಾಪನಾಳಮಠ, ರಾಘು ಮೊಗಳ, ಜಯಶ್ರೀ ಬಂಗಾರಿ, ಬಸಮ್ಮ ವಡಗೇರಿ, ಸ್ನೇಹಾ ಹಕ್ಕಿ, ಮಧುಮತಿ ನಿಕ್ಕಂ, ಸರೋಜಿನಿ ಕಟ್ಟಿಮನಿ, ಅಂಬಿಕಾ ಶಿರಕನಹಳ್ಳಿ, ರೇಣುಕಾ ಭಜಂತ್ರಿ, ಕಾವೇರಿ ಅಂಕಲಗಿ, ಚಂದು ಹಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Wednesday, September 14, 2022

ಜನ ಹೋಗದೇ ಇರೋದಕ್ಕೆ ಆಸರೆ ಮನೆಗಳು ಪಾಳು ಬಿದ್ದಿವೆ, ಕಳಪೆ ಕಾಮಗಾರಿಯಿಂದಲ್ಲ: ಗೋವಿಂದ ಕಾರಜೋಳ




ಈ ದಿವಸ ವಾರ್ತೆ

ವಿಜಯಪುರ : ಸರ್ಕಾರ ಆಸರೆ ಎಂಬ ಯೋಜನೆಯಡಿ 2009ರಲ್ಲಿ ಪ್ರವಾಹ ಪೀಡಿತರಿಗೆ ಮನೆ ನಿರ್ಮಾಣ ಮಾಡಿತ್ತು. ಆದರೆ, ಜನ ತಮ್ಮ ಊರು ಬಿಟ್ಟು ಅಲ್ಲಿಗೆ ಹೋಗದೇ ಇರುವುದಕ್ಕೆ ಮನೆಗಳು ಪಾಳುಬಿದ್ದಿವೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿದ ಅವರು,  2009ರಲ್ಲಿ ಯಡಿಯೂರಪ್ಪ ಸಿಎಂ ಆಗಿದ್ದಾಗ 100 ವರ್ಷದ ಇತಿಹಾಸ ಮೀರಿದ ಮಳೆ ಆಯ್ತು. ಅನೇಕ ಹಳ್ಳ, ಕೊಳ್ಳ ನದಿಗಳು ಉಕ್ಕಿ ಹರಿದು, ಅನೇಕ ಮನೆಗಳಿಗೆ ನೀರು ಹೊಯ್ತು. ಆ ಸಂದರ್ಭದಲ್ಲಿ ಸರ್ಕಾರದಿಂದ ಹಾಗೂ ಕೊಡುವ ದಾನಿಗಳಿಂದ ಹಣ ಪಡೆದು ಕೆಲವು ಗ್ರಾಮಗಳನ್ನು ನಿರ್ಮಾಣ ಮಾಡಿದರು. ಸರ್ಕಾರಿ ಜಮೀನು ಇರ್ಲಿಲ್ಲ, ಜಮೀನು ಖರೀದಿ ಮಾಡಿ ಮನೆಗಳನ್ನು ಕಟ್ಟಿ ಕೊಟ್ವಿ ಎಂದರು.

ಜನ ಪ್ರವಾಹ ಕಮ್ಮಿಯಾದ ಸಂದರ್ಭದಲ್ಲಿ, ಮತ್ತೆ ಹಳೆಯ ಊರುಗಳಿಗೆ ಹೋದರು. ಆ ಮನೆಗಳಿಗೆ ವಾಸಕ್ಕೆ  ಯಾರು ಹೋಗದೇ ಇರುವುದರಿಂದ ಜನ ನೀರಿನ ವ್ಯವಸ್ಥೆ ಪೈಪ್‌ಗಳನ್ನು, ಮೋಟಾರ್‌ಗಳನ್ನು ಕಿತ್ತುಕೊಂಡು ಹೋದರು. ಸರ್ಕಾರ ಆಸರೆ ಎಂಬ ಯೋಜನೆಯಡಿ 35 ಅಳತೆಯ ಸೈಟ್ ಕೊಟ್ಟು, ಮನೆ ಮಾಡಿಕೊಟ್ಟರು. ಯಾರು ಹೋಗಿಲ್ಲ ಅಂತ ಅವು ಪಾಳುಬಿದ್ದಿವೆ. ದಾನಿಗಳು ಸ್ವತಃ ಕಟ್ಟಿಕೊಟ್ಟಿದ್ದಾರೆ, ಸರ್ಕಾರವು ಕಟ್ಟಿಕೊಟ್ಟಿದೆ ಎಂದು ಹೇಳಿದರು.

2019-20 ನೇ ಸಾಲಿನಲ್ಲಿ 1205 ಕೋಟಿ ಪರಿಹಾರವನ್ನ ಒಂದೇ ಜಿಲ್ಲೆಗೆ ಕೊಟ್ಟಿದ್ದೇವೆ. 46,959 ಮನೆಗೆ ಕೊಟ್ಟಿದ್ದೇವೆ. ದೇಶದ ಇತಿಹಾಸದಲ್ಲೇ ಒಂದು ವರ್ಷದಲ್ಲಿ ಯಾರಾದ್ರೂ ಕೊಡಲು ಸಾಧ್ಯನಾ. ದಯವಿಟ್ಟು ಯಾರಾದ್ರೂ ಒಬ್ಬರು ಹೇಳಿದ್ರೆ ಅದು ಶಾಶ್ವತ ಅಲ್ಲ. ರೆಕಾರ್ಡ್ ಇದೆ ಬೇಕಾದ್ರೆ ನಾನು ಕಳುಹಿಸಿಕೊಡುತ್ತೇನೆ ಎಂದರು.

15-09-2022 EE DIVASA KANNADA DAILY NEWS PAPER

14-09-2022 EE DIVASA KANNADA DAILY NEWS PAPER

13-09-2022 EE DIVASA KANNADA DAILY NEWS PAPER