87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣ ಮಾಡಿದ ಸಮ್ಮೇಳನಾಧ್ಯಕ್ಷರಾದ ಡಾ.ಗೊ.ರು.ಚನ್ನಬಸಪ್ಪ ಅವರು, ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮವೇ ಕಡ್ಡಾಯವಾಗಬೇಕು. ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಸರ್ಕಾರ ತೆರೆಯುವುದನ್ನಾಗಲಿ, ಖಾಸಗಿ ಶಾಲೆಗಳಿಗೆ ಅನುಮತಿ ಕೊಡುವುದನ್ನಾಗಲೀ ಕೂಡಲೇ ನಿಲ್ಲಿಸಬೇಕು. ತಂತ್ರಜ್ಞಾನದ ನೆರವು ಪಡೆದು ಕನ್ನಡವನ್ನು ಕಿರಿಯ ಪೀಳಿಗೆಯ ಎದೆಗೆ ಬೀಳುವ ಅಕ್ಷರವಾಗಿಸಬೇಕು ಎಂದು ಕರೆ ನೀಡಿದರು.
ಅಗತ್ಯವೆನಿಸಿರುವ ಇಂಗ್ಲೀಷ್ ಕಲಿಕೆಗೆ ಪ್ರತ್ಯೇಕ ವ್ಯವಸ್ಥೆ ಮಾಡಿ, ಬೋಧನೆಗೆ ತರಬೇತಿ ಪಡೆದ ಶಿಕ್ಷಕರನ್ನು ನೇಮಿಸಬೇಕು ಮತ್ತು ಗ್ರಾಮೀಣ ಭಾಗದ ಕನ್ನಡ ಶಾಲೆಗಳನ್ನು, ಎಲ್ಲ ಸೌಲಭ್ಯಗಳಿಂದ ಪೂರ್ಣವಾಗಿ ಸಜ್ಜುಗೊಳಿಸಬೇಕು. ರಾಜ್ಯದ ಆಯವಯ್ಯದಲ್ಲಿ ಕನಿಷ್ಟ ಶೇ.15 ರಷ್ಟು ಅನುದಾನವನ್ನು ಶಿಕ್ಷಣಕ್ಕೆ ಮೀಸಲಿಡಬೇಕು ಎಂದು ಹೇಳಿದರು.
87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಗೊ.ರು.ಚನ್ನಬಸಪ್ಪ ಅವರ ಭಾಷಣದ 21 ಪ್ರಮುಖ ಅಂಶಗಳು :
ಕನ್ನಡವು ಕಾವ್ಯ, ಕವನ, ನಾಟಕ, ಕಾದಂಬರಿ, ವ್ಯಾಕರಣ ಮುಂತಾದ ಪರಂಪರೆಯ ಸಾಹಿತ್ಯಕ್ಕೆ ಸೀಮಿತವಾಗಿ ಉಳಿದಿಲ್ಲ.
ವಿಜ್ಞಾನ, ತಂತ್ರಜ್ಞಾನ, ಕಾನೂನು, ವೈದ್ಯಕೀಯ ಮುಂತಾದ ಕ್ಷೇತ್ರದಲ್ಲಿ ಕನ್ನಡ ಬೆಳೆಯುತ್ತಿದೆ
ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸಬೇಕು. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕೈಂಕರ್ಯದಲ್ಲಿ ಉದ್ಯಮಿಗಳು, ಸ್ವಯಂ ಸೇವಾ ಸಂಸ್ಥೆಗಳು, ವಿದೇಶಿ ಕನ್ನಡಿಗರು ಕೈಜೋಡಿಸಬೇಕು.
ಕನ್ನಡ ಭಾಷೆಯ ಬೆಳವಣಿಗೆಗೆ ತಂತ್ರಜ್ಞಾನದ ಪೋಷಣೆ ಅತ್ಯಗತ್ಯ. ಗೂಗಲ್, ಯಾಂತ್ರಿಕ ಬುದ್ಧಿಮತ್ತೆಗೂ ಬರಲಿ ಶುದ್ಧ ಕನ್ನಡ ಪ್ರೇಮ.
ಜ್ಞಾನ ಪಡೆಯುವ ತಂತ್ರಜ್ಞಾನಕ್ಕೆ ಕನ್ನಡವನ್ನು ಹೊಂದಿಸಿದರೆ ಕನ್ನಡ ಜ್ಞಾನದ ಭಾಷೆ ಆಗುತ್ತದೆ.
ಜನಪ್ರಧಿನಿಧಿಗಳಲ್ಲಿ, ಉನ್ನತ ಅಧಿಕಾರಿಗಳಲ್ಲಿ ಕನ್ನಡ ಭಾಷಾ ಪ್ರೇಮದ ಕೊರತೆ ಇರುವಂತೆ ಕಾಣುತ್ತದೆ.
ಕನ್ನಡ ಸಾಹಿತ್ಯ ಪರಿಷತ್ತು ಬೇರೆ ಬೇರೆ ಭಾಷೆಗಳ ಜೊತೆಯಲ್ಲಿ ವಿನಿಮಯ ಕಾರ್ಯಕ್ರಮಗಳನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಬೇಕು.
ಕಲೆ, ನಾಟಕ, ಸಂಗೀತ, ಬಯಲಾಟ ಮುಂತಾದವುಗಳನ್ನು ಉತ್ತರ ಭಾರತದ ರಾಜ್ಯಗಳಿಗೆ ಪರಿಚಯಿಸಿಕೊಡುವ ಕೆಲಸ ಆದ್ಯತೆಯ ಮೇಲೆ ಮಾಡಬೇಕು
ಹಿಂದಿ ಭಾಷೆಯನ್ನು ರಾಷ್ಟ್ರ ಭಾಷೆ ಎಂಬುದನ್ನು ಪ್ರತ್ಯಕ್ಷ, ಪರೋಕ್ಷವಾಗಿ ಹೇರುವ ಹುನ್ನಾರವನ್ನು ಕೇಂದ್ರ ಸರ್ಕಾರಗಳು ಮಾಡುತ್ತಲೇ ಬಂದಿವೆ
ಕನ್ನಡ ವಿಶ್ವವಿದ್ಯಾನಿಲಯಕ್ಕೆ ವಿಶೇಷ ಗಮನ ಹರಿಸಬೇಕು
ಕೇಂದ್ರ ರಾಜ್ಯಗಳ ಹಣಕಾಸು ಸಂಬಂಧದ ಕುರಿತು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಗಬೇಕು. ಕೇಂದ್ರ ಸರ್ಕಾರ ಸಂವಿಧಾನ ಮತ್ತು ಹಣಕಾಸು ತಜ್ಞರ ಒಂದು ವಿಶೇಷ ಆಯೋಗ ರಚಿಸಬೇಕು.
ಹಬ್ಬ, ಹರಿದಿನಗಳು, ಉತ್ಸವ ಆರಾಧನೆಗಳು, ಧಾರ್ಮಿಕ ಮುಖಂಡರ ಜಯಂತಿಗಳು ಜನರನ್ನು ಒಟ್ಟಿಗೆ ತರುವ ಕೆಲಸಕ್ಕೆ ಬದಲಾಗಿ ಸಮಾಜವನ್ನು ಒಡೆಯುವ ಆಯುಧಗಳಾಗುತ್ತಿವೆ.
ಪರಿಸರ ಉಳಿದರೆ ಮಾನವ ಉಳಿಯುವುದು. ಭಾರತದ ಜೀವಜಲವಾಗಿರುವ ಪಶ್ಚಿಮ ಘಟ್ಟವು ಇಂದು ಅಪಾಯವನ್ನು ಎದುರಿಸುತ್ತಿದೆ. ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಯಬಾರದು. ಪಶ್ಚಿಮಘಟ್ಟ ಪ್ರದೇಶ ಅನೇಕ ಮುಖ್ಯ ನದಿಗಳ ಮೂಲವಾಗಿದ್ದು ಅದರ ರಕ್ಷಣೆಗೆ ಆದ್ಯತೆ ನೀಡಬೇಕು.
ಲಿಂಗ ಸಮಾನತೆಯ ಮೌಲ್ಯವನ್ನು ಇಂದಿನ ಜೀವನದಲ್ಲಿ ಅಳವಡಿಸಿಕೊಳಗಳುವ ಅಗತ್ಯವನ್ನು ನಾವು ಮನಗಾಣಬೇಕು.
ಕನ್ನಡಿಗರಿಗೆ ಉದ್ಯೋಗದ ಅವಕಾಶಗಳು ಹೆಚ್ಚು ದೊರೆಯುತ್ತಿಲ್ಲ. ನಿರುದ್ಯೋಗ ಯುವಜನತರಯ ಬದುಕನ್ನು ದುರ್ಭರಗೊಳಿಸುತ್ತಿದೆ.
ಸರೋಜಿನಿ ಮಹಿಷಿ ಸಮಿತಿ ವರದಿ ಇನ್ನೂ ಅನುಷ್ಠಾನಗೊಂಡಿಲ್ಲ. ಕೂಡಲೇ ಅನುಷ್ಠಾನಗೊಳಿಸಬೇಕು.
ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಹಿಂದಿ ಭಾಷಿಕರು ತುಂಬಿ ಹೋಗಿದ್ದಾರೆ. ಕೇಂದ್ರ ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿಂದಿಗೆ ಪ್ರಾಶಸ್ತ್ಯ ನೀಡುತ್ತಾ ಕನ್ನಡವನ್ನು ನಿರ್ಲಕ್ಷ್ಯ ಮಾಡುತ್ತಿದೆ. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಡುವುದು ಸಂವಿಧಾನ ಅಥವಾ ಒಕ್ಕೂಟ ತತ್ವಕ್ಕೆ ವಿರೋಧಿ ಕ್ರಮವೇನಲ್ಲ.
ಗಡಿನಾಡು ಪ್ರದೇಶಗಳಲ್ಲಿರುವ ಕನ್ನಡಿಗರಲ್ಲಿ ಕನ್ನಡತನ, ಕನ್ನಡ ಪ್ರಜ್ಞೆಗಳನ್ನು ಮೂಡಿಸುವ ಬಗ್ಗೆ ತಾತ್ವಿಕ ನಿರ್ಧಾರ ಕೈಗೊಳ್ಳಬೇಕು.
ಗ್ರಾಮೀಣ ಪ್ರದೇಶದ ಗ್ರಂಥಾಲಯಗಳು ಕಟ್ಟಡದ ಕೊರತೆ, ವಾರ್ತಾ ಪತ್ರಿಕೆಗಳ ಮತ್ತು ವಾರ್ಷಿಕವಾಗಿ ಪುಸ್ತಕಗಳ ಸಂಗ್ರಹ ಸೇರಿದಂತೆ ಮುಂತಾದ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದರ ಬಗ್ಗೆ ಸರ್ಕಾರ ಸೂಕ್ತ ಗಮನ ನೀಡಬೇಕು.
ಶಾಲಾ ಕಾಲೇಜು ಮಕ್ಕಳಿಗೆ ನಮ್ಮ ಇತಿಹಾಸ, ಪ್ರಕೃತಿ, ವನ್ಯಜೀವಿಧಾಮ ಮುಂತಾದವುಗಳ ಪರಿಚಯವಾಗುವಂತೆ ನಿಯತಕಾಲಿಕವಾಗಿ ಪ್ರವಾಸಗಳನ್ನು ಏರ್ಪಡಿಸುವಂತೆ ಒಂದು ಕ್ರಮಬದ್ಧ ಯೋಜನೆಯನ್ನು ರೂಪಿಸಬೇಕು.
ಕನ್ನಡ ಶಾಸ್ತ್ರೀಯ ಭಾಷಾ ಉನ್ನತ ಅಧ್ಯಯನ ಕೇಂದ್ರವನ್ನು ಬೆಳೆಸುವಲ್ಲಿ ಸರ್ಕಾರ ಮತ್ತು ಕನ್ನಡ ವಿದ್ವಾಂಸರು ಗಮನ ಕೊಡಬೇಕು.
ರಾಜ್ಯಾದ್ಯಂತ ಆಸಕ್ತರಿಗೆ ವಿಶೇಷ ಸೂಚನೆ:
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಜಿಲ್ಲೆ, ಪಟ್ಟಣ, ತಾಲೂಕು, ಗ್ರಾಮಗಳಲ್ಲಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment