ವಿಜಯಪುರ : ಸಮಗ್ರ ನೀರಾವರಿಗಾಗಿ ಪ್ರತ್ಯೇಕ ವಿಶೇಷ ಅಧಿವೇಶನವನ್ನು ವಿಜಯಪುರ ನಗರದಲ್ಲಿ ನಡೆಸಲು ಹಾಗೂ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟ ಎತ್ತಿರಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಒತ್ತಾಯಿಸಿ ಅಖಂಡ ಕರ್ನಾಟಕ ರೈತ ಸಂಘ ಜಿಲ್ಲಾ ಘಟಕದ ವತಿಯಿಂದ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಆಲಮಟ್ಟಿ ಲಾಲ್ ಬಹಾದ್ದೂರ ಶಾಸ್ತ್ರಿ ಜಲಾಶಯದ ನೀರಿನ ಮಟ್ಟವನ್ನು 524.256ಕ್ಕೆ ನೀರು ನಿಲ್ಲಿಸಲು ನ್ಯಾಯಮೂರ್ತಿ ಬ್ರಿಜೇಶ್ ಕುಮಾರ ನೇತೃತ್ವದ 2ನೇ ನ್ಯಾಯಾಧೀಕರಣವು 2010 ರಲ್ಲಿ ತೀರ್ಪು ನೀಡಿತ್ತು. 2013ರಲ್ಲಿ ಅಂತಿಮ ತೀರ್ಪು ನೀಡಿದ್ದು ಇಲ್ಲಿವರೆಗೂ ಜಲಾಶಯದ ನೀರಿನಮಟ್ಟವನ್ನು ಎತ್ತರಿಸಲು ಇನ್ನೂವರೆಗೂ ಗೇಟ್ ಅಳವಡಿಸಿಲ್ಲ. ಹೀಗಾಗಿ ವಿಜಯಪುರ ಜಿಲ್ಲೆ ಇನ್ನೂ ಸಂಪೂರ್ಣ ನೀರಾವರಿಗೆ ಒಳಪಟ್ಟಿಲ್ಲ. ಬೇಸಿಗೆ ಸಂದರ್ಭದಲ್ಲಿ ಒಂದೊಂದು ಬಾರಿ ಕುಡಿಯಲು ಕೂಡ ನೀರಿನ ತತ್ವಾರ ಎದುರಾಗುತ್ತದೆ. 5 ನದಿಗಳು ಹರಿದು ಪಂಚ ನದಿಗಳ ಬೀಡು ಎಂದು ಹೇಳಿಕೊಳ್ಳಲು ಮಾತ್ರ ಸೀಮಿತವಾಗಿದೆ. ಆದರೆ ಸಮಗ್ರ ನೀರಾವರಿಗೆ ಸರ್ಕಾರ ಮನಸ್ಸು ಮಾಡುತ್ತಿಲ್ಲ. 524.256 ಕ್ಕೆ ನೀರು ನಿಲ್ಲಿಸಿದರೆ ಇನ್ನೂ ಅಂದಾಜು 20 ರಿಂದ 22 ಹಳ್ಳಿಗಳು ಬಾಧಿತಗೊಳ್ಳುತ್ತವೆ. ಅಂದಾಜು ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೆರ್ ಜಮೀನು ಮುಳುಗಡೆ ಹೊಂದುತ್ತವೆ. ಇವೆಲ್ಲವುಗಳಿಗೆ ಪುನರ್ವಸತಿ ಮತ್ತು ಪುನರ್ನಿರ್ಮಾಣ ಹಾಗೂ ಜಮೀನುಗಳ ಪರಿಹಾರಕ್ಕೆ ಅಂದಾಜು 75 ಸಾವಿರ ಕೋಟಿಯಿಂದ 1 ಲಕ್ಷ ಕೋಟಿ ವರೆಗೆ ಹಣ ಬೇಕು. ಈ ಕುರಿತು ಹಿಂದಿನ ಅಧಿವೇಶನದಲ್ಲಿಯೂ ಕೂಡ ಸರ್ಕಾರ ಆಲಮಟ್ಟಿ ಜಲಾಶಯದ ಕುರಿತು ಯಾವೊಬ್ಬರು ಶಾಸಕರಾಗಲಿ ಸಚಿವರಾಗಲಿ ಮಾತನಾಡಲಿಲ್ಲ. ಹೀಗಾಗಿ ಜಿಲ್ಲೆಯ ರೈತರು ಹತಾಶಗೊಂಡಿದ್ದಾರೆ. ಇನ್ನು ಮುಂದಾದರೂ ಸರ್ಕಾರ ಇದಕ್ಕಾಗಿಯೇ ಪ್ರತ್ಯೇಕವಾಗಿ ವಿಶೇಷ ಅಧಿವೇಶವನ್ನು ವಿಜಯಪುರ ನಗರದಲ್ಲಿಯೇ ಹಮ್ಮಿಕೊಂಡು ನೀರಾವರಿ ಕುರಿತು ಸಮಗ್ರ ಚರ್ಚಿಸಿ ನ್ಯಾಯಾಧೀಕರಣ ತೀರ್ಪಿನಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ವಿಜಯಪುರದಲ್ಲಿಯೇ ವಿಶೇಷ ಅಧಿವೇಶನ ನಡೆಸಿದರೆ ಅನಿವಾರ್ಯವಾಗಿ ಜಿಲ್ಲೆಯ ಶಾಸಕರು ಸಚಿವರು ಅನಿವಾರ್ಯವಾಗಿ ವಿಷಯವನ್ನು ಪ್ರಸ್ತಾಪ ಮಾಡಲೇಬೇಕಾಗುತ್ತದೆ ಎಂದರು.
ರಾಜ್ಯದ ರೈತರಿಗೆ ಸಬ್ಸಿಡಿ ರೀತಿಯಲ್ಲಿ ಸಮರ್ಪಕವಾಗಿ ಸ್ಪ್ರಿಂಕ್ಲರ್ ಸೆಟ್ಟುಗಳನ್ನು ರೈತರಿಗೆ ಕೊರತೆಯಾಗದಂತೆ ಪೂರೈಸಬೇಕು. ಹಿಂದಿನ ಸರ್ಕಾರದ ಅವಧಿಯಲ್ಲಿ ರೈತರಿಗೆ ಸ್ಪ್ರಿಂಕ್ಲರ್ ಉಪಕರಣಗಳನ್ನು ಸರಿಯಾಗಿ ಸರಬರಾಜು ಮಾಡದೆ ಇರುವುದರಿಂದ ಬಹುತೇಕ ರೈತರಿಗೆ ಉಪಕರಣಗಳು ಲಭ್ಯವಾಗಿಲ್ಲ. ಒಂದೊಂದು ಜಿಲ್ಲೆಗೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಹಾಗೂ ಸಾಮಾನ್ಯ ರೈತರು ಎಲ್ಲ ಸೇರಿದರೂ ಕೇವಲ 10 ಸಾವಿರ ಸ್ಪ್ರಿಂಕ್ಲರ್ ಸೆಟ್ಟುಗಳನ್ನು ಪ್ರತಿಯೊಂದು ಜಿಲ್ಲೆಗೆ ಪೂರೈಸಿದ್ದಾರೆ. ಇದೇ ರೀತಿ ನಮ್ಮ ಜಿಲ್ಲೆಗೂ 10 ಸಾವಿರ ಸೆಟ್ಟುಗಳನ್ನು ಪೂರೈಸಿದ್ದಾರೆ. ಅತೀ ಕಡಿಮೆ ಸ್ಪ್ರಿಂಕರ್ ಸೆಟ್ಟುಗಳನ್ನು ಪೂರೈಸಿದ್ದರಿಂದ ಒಬ್ಬರಿಗೆ ಸಿಕ್ಕಿತ್ತು ಇನ್ನೊಬ್ಬ ರೈತರಿಗೆ ಸಿಕ್ಕಿಲ್ಲ ಎಂಬಂತಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ರೈತರ ಸಂಖ್ಯೆಯನ್ನು ಗಣನೆಗೆ ತೆಗೆದುಕೊಂಡು ಅಗತ್ಯವಿರುವಷ್ಟು ಸ್ಪ್ರಿಂಕ್ಲರ್ ಸೆಟ್ಟುಗಳನ್ನು ಪೂರೈಸಬೇಕೆಂದು ಒತ್ತಾಯಿಸಿದರು.
ಈ ಹಿಂದೆ ರೈತರು ಪೋಡಿಮಾಡಲು ಅರ್ಜಿ ಸಲ್ಲಿಸಿದ ಸಂದರ್ಭದಲ್ಲಿ ಎಷ್ಟೇ ಎಕರೆ ಜಮೀನು ಹೊಂದಿದ್ದರೂ ಈ ಮೊದಲು 1200 ರೂ. ಮಾತ್ರ ಭರಣಾಮಾಡಿಕೊಂಡು ಪೋಡಿ ಮಾಡಿಕೊಡುತ್ತಿದ್ದರು. ಈ ಸದ್ಯ ಪೋಡಿ ಮಾಡಲು 2 ಎಕರೆಗೆ 1500 ರೂ. ನಂತೆ ಭರಣಾ ಮಾಡಿಕೊಂಡು ಮುಂದೆ ಪ್ರತಿ ಎಕರೆಗೆ 400 ರೂಪಾಯಿಯಂತೆ ಭರಣಾ ಮಾಡಬೇಕಾಗುತ್ತದೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಮೊದಲಿನಂತೆ ಎಷ್ಟೇ ಎಕರೆ ಜಮೀನು ಹೊಂದಿದ್ದರೂ 1200 ರೂಪಾಯಿಯಲ್ಲಿ ಪೋಡಿ ಮಾಡಿ ಕೊಡಬೇಕೆಂದು ಆಗ್ರಹಿಸಿದರು.
ಬಸವನ ಬಾಗೇವಾಡಿ ತಾಲೂಕಿನ ಕವಲಗಿ, ಅಂಗಡಗೇರಿ, ತೆಲಗಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕೃಷಿ ಪಂಪ್ ಸೆಟ್ಟುಗಳಿಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ. ಗುಣ ಮಟ್ಟದ ಪೂರೈಕೆ ಇಲ್ಲದ ಕಾರಣ ಮನೆಗಳ ವಿದ್ಯುತ್ ದೀಪಗಳು ಸಂಪೂರ್ಣ ಕಳಪೆ ಮಟ್ಟದಲ್ಲಿ ಇರುವುದರಿಂದ ಮೊಬೈಲ್ ಚಾರ್ಜ್ಕೂಡ ಆಗುವುದಿಲ್ಲ. ಕೃಷಿ ಪಂಪ್ ಸೆಟ್ಟುಗಳು ಪ್ರಾರಂಭವಾಗುವುದಿಲ್ಲ. ಆದ್ದರಿಂದ ಗುಣಮಟ್ಟದಿಂದ ವಿದ್ಯುತ್ನ್ನು ಪೂರೈಸಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸದಾಶಿವ ಬರಟಗಿ, ತಾ. ಉಪಾಧ್ಯಕ್ಷರು ಬ.ಬಾಗೇವಾಡಿ ಹೊನಕೇರೆಪ್ಪ ತೆಲಗಿ, ತಾಲೂಕ ಕಾರ್ಯಾಧ್ಯಕ್ಷರು ಸೋಮನಗೌಡ ಪಾಟೀಲ, ಸಿದ್ದಪ್ಪ ಕಲಬೀಳಗಿ, ಸಂಗಪ್ಪ ಮುಂಡಗನೂರ, ನಂದುಗೌಡ ಬಿರಾದಾರ, ಗುರಲಿಂಗಪ್ಪ ಪಡಸಲಗಿ, ದಾವಲಸಾಬ ನಧಾಫ, ಬಸಯ್ಯಮಠ, ರಾಮನಗೌಡ ಹಾದಿಮನಿ, ಶಿವರಾಜ ಬಿರಾದಾರ, ಬಸನಗೌಡ ಪಾಟೀಲ,ಅಪ್ಪಾಸಾಹೇಬಗೌಡ ಕೋಳೂರ, ಮಲ್ಲಿಕಾರ್ಜುನ ನಾವಿ ಸೇರಿದಂತೆ ಮುಂತಾದವರುಉಪಸ್ಥಿತರಿದ್ದರು.
ಯುವ ಪ್ರತಿಭೆಗಳು, ಹಿರಿ-ಕಿರಿ ಆಸಕ್ತ ಸಾಹಿತಿ, ಕವಿ, ಲೇಖಕರಿಗೆ ಈ ದಿವಸ ವೇದಿಕೆ ಕಲ್ಪಿಸುತ್ತಿದೆ. ಆಸಕ್ತರು ತಮ್ಮ ಸ್ವ ರಚಿತ ಲೇಖನ, ಕಥೆ, ಕವನ , ಶಾಲಾ ಕಾಲೇಜಿನ, ವಿಶ್ವವಿದ್ಯಾಲಯ ವರದಿ, ಹೋರಾಟಗಾರರ ಮನವಿ, ತಮ್ಮ ಊರಿನ ಸಮಸ್ಯೆಗಳು ಸೇರಿದಂತೆ ಇತರೆ ಸುದ್ದಿ ಹಾಗೂ ಜಾಹೀರಾತುಗಳನ್ನು ಪ್ರಕಟಿಸಲು ಇಂದೇ ಸಂಪರ್ಕಿಸಿರಿ.
ಸಂಪಾದಕರು ಈ ದಿವಸ ಕನ್ನಡ ದಿನ ಪತ್ರಿಕೆ ವ್ಯಾಟ್ಸಪ್ ಸಂಖ್ಯೆ : 7204279187 / 9900378892 ತಾವು ಟೈಪಿಸಿ eedivasa@gmail.com ಈ ಮೇಲ್ ಗೂ ಮೇಲ್ ಸೆಂಡ್ ಮಾಡಿದರೆ ಪ್ರಕಟಿಸಲಾಗುವುದು.
No comments:
Post a Comment